ಕೊರಟಗೆರೆ : ಅಣ್ಣ–ತಂಗಿಯ ಅನೈತಿಕ ಸಂಬಂಧಕ್ಕೆ ತಾಯಿ ಅಡ್ಡ ಬರುತ್ತಾರೆ ಎಂಬ ಕಾರಣಕ್ಕೆ ಮಲಗಿದ್ದ ತಾಯಿಯನ್ನು ಮಧ್ಯರಾತ್ರಿ ಉಸಿರುಕಟ್ಟಿಸಿ ಕೊಲೆ ಮಾಡಿದ ವಿಲಕ್ಷಣ ಘಟನೆಯನ್ನು ಕೊರಟಗೆರೆ ಪೊಲೀಸರು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊರಟಗೆರೆ ಪಟ್ಟಣದ ಸಜ್ಜನರ ಬೀದಿ ಕೃಷ್ಣಾಚಾರ್ ಎಂಬವರ ಪತ್ನಿ 45 ವರ್ಷ ವಯಸ್ಸಿನ ಸಾವಿತ್ರಮ್ಮ ಹತ್ಯೆಗೀಡಾದವರಾಗಿದ್ದಾರೆ. ಸಾವಿತ್ರಮ್ಮನ ಮಗಳು ಶೈಲಜಾ ಹಾಗೂ ಸಾವಿತ್ರಮ್ಮನ ತಂಗಿಯ ಮಗ ಪುನೀತ್ ಹತ್ಯೆ ಆರೋಪಿಗಳಾಗಿದ್ದಾರೆ.
ಸಂಬಂಧದಲ್ಲಿ ಅಣ್ಣ ತಂಗಿಯಾಗಿದ್ದ ಪುನೀತ್ ಮತ್ತು ಶೈಲಜಾ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದ್ದು, ಈ ಸಂಬಂಧಕ್ಕೆ ಸಾವಿತ್ರಮ್ಮ ಅಡ್ಡವಾಗುತ್ತಿದ್ದಾರೆ ಎಂಬ ಕಾರಣಕ್ಕೆ ಮಲಗಿದ್ದ ವೇಳೆ ಇಬ್ಬರೂ ಸೇರಿ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದು, ಬಳಿಕ ನೀರಿನ ಸಂಪಿನೊಳಗೆ ಮೃತದೇಹವನ್ನು ಹಾಕಿ ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಸಂಬಂಧಿಕರು ಕೂಡ ಸಾವಿತ್ರಮ್ಮ ನೀರಿನ ಸಂಪಿಗೆ ಬಿದ್ದ ಮೃತಪಟ್ಟಿರಬಹುದು ಎಂದು ನಂಬಿದ್ದರು. ಹಾಗಾಗಿ ಮರಣೋತ್ತರ ಪರೀಕ್ಷೆ ನಡೆಸದೆಯೇ ಅಂತ್ಯಕ್ರಿಯೆ ನಡೆಸಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ಮೇಲೆ ಅನುಮಾನಗೊಂಡು ಪೊಲೀಸರು ವಿಚಾರಿಸಿದಾಗ ಹತ್ಯೆ ಪ್ರಕರಣ ಬಯಲಾಗಿದ್ದು, ಇಬ್ಬರು ಆರೋಪಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ರಾಮೇಶ್ವರ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB