ತುಮಕೂರು: ಭಾನುವಾರ ಮುಂಜಾನೆ ನಿಧನರಾದ ಸಚಿವ ಡಿ.ಸುಧಾಕರ್ ಅವರ ಪಾರ್ಥಿವ ಶರೀರವನ್ನು ಸುಕ್ಷೇತ್ರ ಹಿರಿಯೂರಿಗೆ ಕೊಂಡೊಯ್ಯುವ ಮುನ್ನ ಮಾರ್ಗಮಧ್ಯೆ ತುಮಕೂರಿನ ಬಟವಾಡಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅರ್ಧತಾಸು ನಿಲ್ಲಿಸಿ ತುಮಕೂರಿನ ಅವರ ಬಂಧುಗಳು, ಜೈನ ಸಮಾಜದ ಮುಖಂಡರು, ಗಣ್ಯರು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಭಾನುವಾರ ಮಧ್ಯಾಹ್ನ 1.20ರ ಸಮಯಕ್ಕೆ ಬಟವಾಡಿಗೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಮಾಜಿ ಸಚಿವ ಕೆ.ಎನ್. ರಾಜಣ್ಣ, ಜೈನ ಸಮಾಜದ ಜಿಲ್ಲಾ ಮುಖಂಡರಾದ ನಾಗರಾಜ ಜೈನ್, ಆರ್.ಎ.ಸುರೇಶ್ ಕುಮಾರ್, ಚಂದ್ರಕೀರ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಉಪಾಧ್ಯಕ್ಷ ಕೆ.ಎಸ್.ರಾಮಮೂರ್ತಿ, ಚಿಂತನಾ ಬಳಗದ ಕೆ.ಪಿ.ಲಕ್ಷ್ಮಿ ಕಾಂತರಾಜ ಅರಸು, ತೇಜೇಶ್, ರಾಜೇಶ್ ಪೆನ್ನ ಮುಂತಾದ ಹಲವರು ಹೂಗುಚ್ಛ ಅರ್ಪಿಸಿ ಅಗಲಿದ ನಾಯಕನಿಗೆ ಅಂತಿಮ ವಿದಾಯ ಹೇಳಿದರು.
ಆ್ಯಂಬುಲೆನ್ಸ್ ನಲ್ಲಿ ಸುಧಾಕರ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿಟ್ಟು ಅಂತಿಮ ನಮನ ಸಲ್ಲಿಸಿದ ರಾಜಣ್ಣ ಅವರು ಆಪ್ತ ಸ್ನೇಹಿತನನ್ನು ನೆನೆದು ಭಾವುಕರಾದರು. ಸುಧಾಕರ್ ಅವರ ಹಿರಿಯ ಸಹೋದರ ತುಮಕೂರಿನ ಡೆನಿನ್ ಲೈಫ್ ಹೋಟೆಲ್ ಮಾಲೀಕ ಹಾಗೂ ಮಹಾಲಕ್ಷ್ಮಿ ಬಡಾವಣೆ ವೆಂಕಟೇಶ್ವರ ದೇವಸ್ಥಾನದ ಅಧ್ಯಕ್ಷ ಡಿ.ಎಸ್.ಕುಮಾರ್ ಅವರನ್ನು ಸಂತೈಸಿದ ಕೆ.ಎನ್.ಆರ್. ಅವರು ಸುಧಾಕರ್ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿ, ಕುಟುಂಬಸ್ಥರಿಗೆ, ಅವರ ಅಭಿಮಾನಿಗಳು ಹಾಗೂ ಕ್ಷೇತ್ರದ ಜನತೆಗೆ ಮೇರುನಾಯಕನ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು. ತುಮಕೂರಿನ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಹ ಸುಧಾಕರ್ ಅವರ ಅಂತಿಮ ದರ್ಶನ ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಸಚಿವ ಸುಧಾಕರ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 3 ದಿನ ಶೋಕಾಚರಣೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಜಿಲ್ಲೆಯಲ್ಲೂ ಸಹ ರಾಷ್ಟ್ರಧ್ವಜವನ್ನು ಸರ್ಕಾರಿ ಕಟ್ಟಡದ ಮೇಲೆ ಅರ್ಧಕ್ಕೆ ಹಾರಿಸುವ ಮೂಲಕ ಶೋಕಾಚರಣೆ ನೆರವೇರಿಸಲಾಗಿದೆ. ಇಂದು ಸುಕ್ಷೇತ್ರ ಹಿರಿಯೂರಿನಲ್ಲಿ ಸಾರ್ವಜನಿಕ ದರ್ಶನದೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದ್ದು ಸಿಎಂ, ಡಿಸಿಎಂ ಭಾಗಿಯಾಗಲಿದ್ದಾರೆ. ಪ್ರಜಾಪ್ರಗತಿ ಸಂಪಾದಕ ಡಾ.ಎಸ್.ನಾಗಣ್ಣ ಅವರು ಸಹ ಡಿ.ಸುಧಾಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಅಜಾತಶತ್ರು ಅಲ್ಪಸಂಖ್ಯಾತರಾದ ಡಿ.ಸುಧಾಕರ್ ಅವರು ಸರ್ವಜನರ ವಿಶ್ವಾಸಗಳಿಸಿ ಕೈಗೊಂಡಿರುವ ಸಾಧನೆ, ಕ್ಷೇತ್ರದ ನೀರಾವರಿ ಯೋಜನೆಗಳ ಜಾರಿಗೆ ಶ್ರಮಿಸಿದ ಹರಿ ಮಾದರಿಯಾಗಿದೆ ಎಂದು ಸ್ಮರಿಸಿದ್ದಾರೆ.
ನನ್ನ ಹಾಗೂ ಸುಧಾಕರ್ ಅವರ ಒಡನಾಟ ನಾಲ್ಕು ದಶಕಕ್ಕೂ ಮೀರಿದ್ದಾಗಿದೆ. ಅವರೊಬ್ಬ ಅಜಾತಶತ್ರು. ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಸೇರಿದ್ದರೂ ಎಲ್ಲಾ ಸಮುದಾಯದವರ ವಿಶ್ವಾಸಗಳಿಸಿ ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗುತ್ತಾ ಬಂದಿದ್ದು ಸುಧಾಕರ್ ಅವರ ಹೆಗ್ಗಳಿಕೆ. ಸಹಕಾರಿ ಕ್ಷೇತ್ರದಲ್ಲಿ ನನ್ನ ಒಡನಾಡಿಯಾಗಿ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಶ್ರೀಯುತರು ಸಹಕಾರ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು. ಬಡವರ ಬಂಧುವಾಗಿ, ಸಾಮಾಜಿಕ ನ್ಯಾಯದ ಪರಿಪಾಲಕರಾಗಿದ್ದರು. ಚಳ್ಳಕೆರೆ, ಹಿರಿಯೂರನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ಜನಮುಖಿಯಾಗಿದ್ದ ಸಚಿವ ಸುಧಾಕರ್ ಅವರ ನಿಧನ ಇಡೀ ಕರ್ನಾಟಕಕ್ಕೆ ತುಂಬಲಾರದ ನಷ್ಟ. ಸರಳ ಸಂಭಾವಿತ ನಾಯಕ ನಮ್ಮನ್ನು ಬೇಗ ಅಗಲಿದ್ದು ತೀವ್ರ ದುಃಖ ತಂದಿದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಸ್ಮರಿಸಿದರು.
ಸುಧಾಕರ್ ಅವರು ವಿಧಿವಶರಾದ ವಿಷಯ ತಿಳಿದು ನಮಗೆಲ್ಲರಿಗೂ ಬಹಳ ನೋವಾಗಿದೆ. ಸುಧಾಕರ್ ಅವರು ಸುದೀರ್ಘ ಕಾಲದ ಅತಿ ಪ್ರಿಯ ಸ್ನೇಹಿತ, ಉತ್ತಮ ಒಡನಾಡಿಯಾಗಿದ್ದರು. ಇಡೀ ಸಮುದಾಯಕ್ಕೆ ಅವರ ಅಗಲಿಕೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ಜೈನ ಸಮುದಾಯಕ್ಕೆ ಸೇರಿದ ಸುಧಾಕರ್, ರಾಜಕೀಯ ಕ್ಷೇತ್ರದಲ್ಲಿ ಇಷ್ಟೊಂದು ಯಶಸ್ವಿಯಾದುದು ಸಾಧನೆ. ಅವರ ಕ್ಷೇತ್ರದಲ್ಲಿ (ಹಿರಿಯೂರು) ಸುಮಾರು 500 ಮನೆಗಳಿಗೂ ಕಡಿಮೆ ಜೈನ ಮತಗಳಿರಬಹುದು. ಆದರೆ ಅಲ್ಲಿನ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಿ ಪದೇ ಪದೇ ಗೆದ್ದು ಬರುತ್ತಿದ್ದರು. ಅಂದರೆ, ಅವರ ಜನಪ್ರಿಯತೆ ಎಷ್ಟು ದೊಡ್ಡದಿತ್ತು ಎಂಬುದು ಅರ್ಥವಾಗುತ್ತದೆ.
— ಡಾ.ಜಿ.ಪರಮೇಶ್ವರ, ಗೃಹ ಸಚಿವ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


