ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಶ್ರೀ ವೀರನಾಗಮ್ಮ ದೇವಾಲಯ ಟ್ರಸ್ಟ್ ಸದಸ್ಯರು ಬಂಗಾರ, ಬೆಳ್ಳಿ, ಅಕ್ಕಿ ಮತ್ತು ಹಣದ ವಹಿವಾಟಿನಲ್ಲಿ ಭಾರೀ ಗೋಲ್ ಮಾಲ್ ನಡೆಸಿರುವ ಆರೋಪ ಕೇಳಿ ಬಂದಿದ್ದು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ಪ್ರಶ್ನೆಗಳಿಗೆ ಟ್ರಸ್ಟಿಗಳ ಮೌನವೇ ಉತ್ತರವಾಯಿತು.
ಬೆಳ್ಳಿ, ಬಂಗಾರ, ಬ್ಯಾಂಕ್ ಪುಸ್ತಕ ಮತ್ತು ದಾಖಲೆಗಳೆಲ್ಲ ಸೀಜ್ ಮಾಡಲಾಗಿದ್ದು, ಟ್ರಸ್ಟ್ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಖಡಕ್ ಆದೇಶ ಮಾಡಿದ್ದಾರೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆಯ ಇತಿಹಾಸ ಪ್ರಸಿದ್ಧ ಶ್ರೀವೀರನಾಗಮ್ಮ ದೇವಾಲಯದ ಕಥೆ ಇದು. ಮುಜರಾಯಿ ಇಲಾಖೆ ಆದೇಶದಂತೆ 2006 ರಲ್ಲಿ ಆರಂಭ ಶ್ರೀ ವೀರನಾಗಮ್ಮ ದೇವಾಲಯ ಸಮಿತಿ ಕಾಲಕ್ರಮೇಣ ಟ್ರಸ್ಟ್ ಆಗಿ ಬದಲಾಗಿದೆ. 19 ವರ್ಷಗಳ ದಾಖಲೆಗಳೇ ಮಾಯವಾಗಿವೆ. ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಕೇಳುವ 20ಕ್ಕೂ ಅಧಿಕ ಪ್ರಶ್ನೆಗಳಿಗೆ ಮೌನವೇ ಉತ್ತರವಾಗಿ ಅಕ್ರಮ ನಡೆದಿರೋದು ಸಾಬೀತಾಗಿದೆ.
ಶ್ರೀ ವೀರನಾಗಮ್ಮ ದೇವಾಲಯದ ಟ್ರಸ್ಟ್ ಮಾಹಿತಿ ಮುಜರಾಯಿ ಇಲಾಖೆಗೆ ನೀಡಿದ್ದೀರಾ? ಟ್ರಸ್ಟ್ ರಚನೆಗೆ ಎಲ್ಲಾ ವರ್ಗದ ಜನತೆ ಇರಬೇಕಾದ ಕಾನೂನು ಗೊತ್ತಿಲ್ಲವೇ? ಭಕ್ತರಿಂದ ಕಾಣಕೆ ರೂಪದಲ್ಲಿ ಪಡೆಯುವ ಹಣ, ಅಕ್ಕಿ, ಬಂಗಾರ, ಬೆಳ್ಳಿ, ವಸ್ತುಗಳಿಗೆ ಪ್ರತ್ಯೇಕ ರಸೀದಿ ಪುಸ್ತಕ ಏಕಿಲ್ಲ? ಬಂಗಾರ, ಬೆಳ್ಳಿ ಮತ್ತು ನಗದು ಹಣದ ಮಾಹಿತಿ ಮುಜರಾಯಿಗೆ ಏಕೆ ನೀಡಿಲ್ಲ? ಎಂಬ 20ಕ್ಕೂ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರವೇ ನೀಡದೇ ಟ್ರಸ್ಟಿಗಳು ಮೌನಕ್ಕೆ ಶರಣಾಗಿದ್ದರು.
ಧಾರ್ಮಿಕ ದತ್ತಿ ಇಲಾಖೆಯ ಕೆ.ಪದ್ಮಾ ನೇತೃತ್ವದಲ್ಲಿ ಕೊರಟಗೆರೆ ತಹಶೀಲ್ದಾರ್ ಮಂಜುನಾಥ, ಪಿಎಸೈ ತಿರ್ಥೇಶ್ ತಂಡ ಪರಿಶೀಲನೆ ನಡೆಸಿದ ನಂತರ ಟ್ರಸ್ಟಿಗಳ ಬಳಿಯಿದ್ದ ಚಿನ್ನಾಭರಣ, ಬೆಳ್ಳಿ, ಟ್ರಸ್ಟ್ ಮತ್ತು ದೇವಾಲಯದ ದಾಖಲೆ, ಬ್ಯಾಂಕು ಪುಸ್ತಕ ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದು ಟ್ರಸ್ಟ್ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಗೆ ಸೂಚಿಸಿದರು.
8 ಬ್ಯಾಂಕಿನಲ್ಲಿ ಟ್ರಸ್ಟ್ ನ ಚಾಲ್ತಿ ಖಾತೆ..
ಬೆಂಗಳೂರಿನ ಶ್ರೀಗಂಧ, ರಾಜಾಜಿನಗರದ ಜನಹಿತ ಬ್ಯಾಂಕು, ತುಮಕೂರು ಕೆಂಪೇಗೌಡ ಪತ್ತಿನ ಸಹಕಾರ ಬ್ಯಾಂಕು, ಕೊರಟಗೆರೆಯ ಕೆನರಾ, ಕುಂಚಶ್ರೀ, ಕರ್ನಾಟಕ, ಎಸ್ ಬಿಎಂ ಬ್ಯಾಂಕು, ವಡ್ಡಗೆರೆಯ ವಿಎಸ್ ಎಸ್ ಎಲ್ ಬ್ಯಾಂಕು ಸೇರಿದಂತೆ 8 ಬ್ಯಾಂಕಿನಲ್ಲಿ ವಡ್ಡಗೆರೆ ಶ್ರೀವೀರನಾಗಮ್ಮ ದೇವಾಲಯ ಟ್ರಸ್ಟ್ ನಲ್ಲಿ ಚಾಲ್ತಿ ಖಾತೆಗಳಿದ್ದು, ಮುಜರಾಯಿ ಇಲಾಖೆಗೆ ಗೊತ್ತಿಲ್ಲದೇ ಅನಧಿಕೃತವಾಗಿ ಕೋಟ್ಯಾಂತರ ರೂ ವಹಿವಾಟು ನಡೆದಿದೆ.
ಧಾರ್ಮಿಕ ದತ್ತಿ ಇಲಾಖೆಗೆ ದೂರು :
ಮುಜರಾಯಿ ಇಲಾಖೆಗೆ ಮಾಹಿತಿಯೇ ನೀಡದೇ ಟ್ರಸ್ಟ್ ಮಾಡಿರುವುದೇ ಅಕ್ರಮ. ಟ್ರಸ್ಟ್ ನಲ್ಲಿ ಒಂದೇ ಸಮುದಾಯದ 14 ಜನ ಟ್ರಸ್ಟಿ ಇರುವುದೇ ಕಾನೂನು ಬಾಹಿರ. ಭಕ್ತರ ನೀಡಿರುವ ಬೆಳ್ಳಿ ಬಂಗಾರ ಟ್ರಸ್ಟಿಗಳ ಮನೆಯಲ್ಲಿದೆ. ಭಕ್ತರು ನೀಡುವ ಕಾಣಿಕೆಯ ಹಣ ಟ್ರಸ್ಟಿಗಳ ಪೋನ್ ಪೇ, ಗೋಗಲ್ ಪೇಗೆ ಹಾಕಿಸಿಕೊಳ್ತಾರೇ. ಬಂಗಾರ–ಬೆಳ್ಳಿ ಕಳ್ಳತನದ ದೂರೇ ದಾಖಲಾಗಿಲ್ಲ. ಕಾಮಗಾರಿಯ ಬೀಲ್ ಗೆ 70 ಲಕ್ಷ ಬಿಲ್ ಮಾಡಿದ್ದಾರೆ. ಪ್ರತಿವರ್ಷ ಆಡಿಲ್ ಮತ್ತು ಸಭಾ ನಡವಳಿಕೆಯೇ ಮಾಡಿಸಿಲ್ಲ ಎಂಬ 15ಕ್ಕೂ ಅಧಿಕ ಅಕ್ರಮದ ಬಗ್ಗೆ ದಾಖಲೆ ಸಮೇತ ಬೆಂಗಳೂರು ಧಾರ್ಮಿಕ ದತ್ತಿ ಇಲಾಖೆಗೆ ನೌಕರರ ಸಂಘದ ಮಾಜಿ ಅಧ್ಯಕ್ಷ ವಿ.ಕೆ.ವೀರಕ್ಯಾತರಾಯ ದೂರು ಸಲ್ಲಿಸಿದ್ದಾರೆ.
ಶ್ರೀ ವೀರನಾಗಮ್ಮ ಟ್ರಸ್ಟ್ ಅಧ್ಯಕ್ಷ ರಾಜೀನಾಮೆ:
ವಡ್ಡಗೆರೆಯ ಶ್ರೀ ವೀರನಾಗಮ್ಮ ದೇವಾಲಯ ಟ್ರಸ್ಟ್ ಸೇರಿದ ಸದಸ್ಯರಾದ ವಿ.ನಾಗೇಶ್, ಶಿವಕುಮಾರ್ ಮತ್ತು ಮಾರುತೀಶ್ ಸೇರಿಕೊಂಡು ಲಕ್ಷಾಂತರ ರೂ ದುರುಪಯೋಗ ಮಾಡಿದ್ದಾರೆ. ಸಮಿತಿಯ ಲೆಕ್ಕಕ್ಕೆ ನೀಡದೇ ವಂಚನೆ ಮಾಡಿರುವ ಪರಿಣಾಮ ಮನನೊಂದು ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು 2025 ರ ಏ. 25 ರಂದು ಮುಜರಾಯಿ ಇಲಾಖೆಗೆ ನೀಡಿರುವ ಪತ್ರ ದೊರೆತಿದೆ.
ಅಭಿವೃದ್ದಿಯ ಜವಾಬ್ದಾರಿ ನಮ್ಮದೇ ಆಗಿದೆ. ಅಭಿವೃದ್ದಿಯ ಹಿತದೃಷ್ಟಿಯಿಂದ ಅಭಿವೃದ್ದಿ ಸಮಿತಿಯನ್ನೇ ಟ್ರಸ್ಟ್ ಮಾಡಿಕೊಂಡ ಹಿರಿಯರ ಆದೇಶದಂತೆ ನಾವು ಕೆಲಸ ಮಾಡಿದ್ದೀವಿ. ಮುಜರಾಯಿ ದೇವಾಲಯ ಎಂಬ ವಿಚಾರ ನಮಗೆ ಗೊತ್ತು. ಟ್ರಸ್ಟ್ ನ ದಾಖಲೆ, ಬಂಗಾರ ಮತ್ತು ಬೆಳ್ಳಿ ಇಲಾಖೆಗೆ ಒಪ್ಪಿಸಿದ್ದೇವೆ. ನಮ್ಮ ದೃಷ್ಟಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ತನಿಖೆ ಆಗಲಿ ನಮ್ಮದೇನು ತಕರಾರು ಇಲ್ಲ.
— ಶಿವಕುಮಾರ್, ಟ್ರಸ್ಟಿ. ಶ್ರೀ ವೀರನಾಗಮ್ಮ ಟ್ರಸ್ಟ್. ವಡ್ಡಗೆರೆ
ಶ್ರೀ ವೀರನಾಗಮ್ಮ ದೇವಾಲಯ ಟ್ರಸ್ಟ್ ಕಾನೂನು ಪ್ರಕಾರ ಯಾವ ಕೆಲಸವನ್ನು ಮಾಡಿಲ್ಲ. ಕಾಣಿಕೆಯ ಹಣದಲ್ಲಿ ಅವ್ಯವಹಾರ ಆಗಿರೋದು ಸಾಬೀತಾಗಿದೆ. ಶ್ರೀ ವೀರನಾಗಮ್ಮ ಟ್ರಸ್ಟ್ ಕಚೇರಿ ಸೀಜ್ ಮಾಡಿ ಬಂಗಾರ, ಬೆಳ್ಳಿ ಮತ್ತು ದಾಖಲೆ ವಶಕ್ಕೆ ಪಡೆಯಲಾಗಿದೆ. ಟ್ರಸ್ಟ್ ಗೆ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಲಾಗಿದೆ. ದೇವಾಲಯದ ದೈನಂದಿನ ಪೂಜಾ ಕಾರ್ಯಕ್ರಮದ ಜವಾಬ್ದಾರಿ ತಹಶೀಲ್ದಾರ್ ಗೆ ವಹಿಸಲಾಗಿದೆ.
— ಕೆ.ಪದ್ಮಾ. ಕೇಂದ್ರ ಸ್ಥಾನಿಕ ಸಹಾಯಕಿ. ಧಾರ್ಮಿಕ ದತ್ತಿ ಇಲಾಖೆ. ಬೆಂಗಳೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW