ತುಮಕೂರು: ತುಮಕೂರು ಗ್ರಾಮಾಂತರ ವ್ಯಾಪ್ತಿಯಲ್ಲಿರುವ ಪಡಿತರ ಚೀಟಿದಾರರು ಕೂಡಲೇ ಕಡ್ಡಾಯವಾಗಿ ಇ–ಕೆವೈಸಿ ಮಾಡಿಸಬೇಕೆಂದು ತಹಶೀಲ್ದಾರ್ ರಾಜೇಶ್ವರಿ ಮನವಿ ಮಾಡಿದ್ದಾರೆ.
ತಾಲ್ಲೂಕಿನಲ್ಲಿ ಪಡಿತರ ಚೀಟಿದಾರರು ತಮ್ಮ ಕುಟುಂಬದಲ್ಲಿ ಇ–ಕೆವೈಸಿ ಆಗದೇ ಇರುವ ಸದಸ್ಯರುಗಳನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಇ–ಕೆವೈಸಿ ಮೂಲಕ ಅಪ್ ಡೇಟ್ ಮಾಡಿಸಬೇಕು. ಪ್ರತಿ ಸದಸ್ಯರ ಚಾಲ್ತಿಯಲ್ಲಿರುವ ಮೊಬೈಲ್ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ನ್ಯಾಯಬೆಲೆ ಅಂಗಡಿಯವರಿಗೆ ಮಾಹಿತಿ ನೀಡಬೇಕು. E–KYC ಅಪ್ ಡೇಟ್ ಮಾಡಿಸದೇ ಇದ್ದಲ್ಲಿ ಅಂತಹ ಫಲಾನುಭವಿಗಳ ಹೆಸರನ್ನು ಪಡಿತರ ಚೀಟಿಯಿಂದ ಕೈಬಿಡಲಾಗುವುದು.
ಈಗಾಗಲೇ ತುಮಕೂರು ತಾಲ್ಲೂಕಿನಲ್ಲಿ ಒಟ್ಟು 2,49,934 ಪಡಿತರ ಚೀಟಿಯ ಸದಸ್ಯರುಗಳಿದ್ದು, ಈವರೆವಿಗೆ 244695 ಸದಸ್ಯರುಗಳ ಇ–ಕೆವೈಸಿ ಪೂರ್ಣಗೊಂಡಿರುತ್ತದೆ. ಉಳಿದ 5239 ಸದಸ್ಯರುಗಳ ಇ–ಕೆವೈಸಿ ಬಾಕಿ ಉಳಿದಿರುವುದರಿಂದ ಎಲ್ಲರೂ ನಿಗದಿತ ಅವಧಿಯೊಳಗೆ ಇ–ಕೆವೈಸಿ ಅಪ್ ಡೇಟ್ ಮಾಡಿಸತಕ್ಕದ್ದು.
ನಿಧನ ಹೊಂದಿರುವ ಕುಟುಂಬದ ಸದಸ್ಯರುಗಳ ಮರಣ ಪ್ರಮಾಣ ಪತ್ರವನ್ನು ಹಾಜರುಪಡಿಸಿ ನ್ಯಾಯಬೆಲೆ ಅಂಗಡಿಯಲ್ಲಿ ಹೆಸರನ್ನು ತೆಗೆಸಬೇಕು. ಕುಟುಂಬದಲ್ಲಿ ಯಾವುದಾದರೂ ಸದಸ್ಯರು ಆಧಾರ್ ಕಾರ್ಡ್ ಸಂಖ್ಯೆ ಪಡಿತರ ಚೀಟಿಗೆ ನಮೂದಾಗದೇ ಇದ್ದಲ್ಲಿ ಅಂತಹವರು ತಮ್ಮ ಹತ್ತಿರದ ಕರ್ನಾಟಕ ಒನ್, ತುಮಕೂರು ಒನ್ ಅಥವಾ ಗ್ರಾಮ ಒನ್ ಸೇವಾ ಕೇಂದ್ರಕ್ಕೆ ಹೋಗಿ ನಮೂದು ಮಾಡಿಸಬೇಕು. ಇ-ಕೆವೈಸಿ ಮಾಡದ ಫಲಾನುಭವಿಯು ಬೇರೆ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ವಾಸವಿದ್ದು, ಅವರ ಆಧಾರ್ ಅವರು ಇರುವ ಸ್ಥಳದಲ್ಲಿ ನವೀಕರಿಸದೇ ಇದ್ದಲ್ಲಿ, ಅಂತಹ ಫಲಾನುಭವಿಗಳನ್ನು ಪಡಿತರ ಚೀಟಿಯಿಂದ ರದ್ದುಪಡಿಸಲಾಗುವುದು.
ಫಲಾನುಭವಿಗಳು ತಮ್ಮ ಇ-ಕೆವೈಸಿ ಸ್ಥಿತಿಯನ್ನು ತಿಳಿದುಕೊಳ್ಳಲು ಮತ್ತು ಸ್ಪಷ್ಠೀಕರಣಗಳನ್ನು ಪಡೆಯಲು ಇಲಾಖೆಯ ನಿಶುಲ್ಕ ಸಹಾಯವಾಣಿ (1967 / 14445 / 1800 425 9339)ಗೆ ಕರೆ ಮಾಡಬಹುದು ಅಥವಾ AHARA ಪೋರ್ಟಲ್ ನ URL ಲಿಂಕ್ ಮೂಲಕ https://ahara.karnataka.gov.in ಪಡಿತರ ಚೀಟಿದಾರರು ತಮ್ಮ ಇ–ಕೆವೈಸಿ ಸ್ಥಿತಿಯನ್ನು ಪರಿಶೀಲಿಸಬಹುದು ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW