ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಉತ್ತಮವಾದ ಜಾಗದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಿಸಲು 75 ಲಕ್ಷ ಹಣವನ್ನು ಮೀಸಲಾಗಿಟ್ಟಿದ್ದು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತೇರಂಶ್ರೀ ಭವನದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ದಲಿತ ಮುಖಂಡರ ಪ್ರಶ್ನೆಗೆ ಉತ್ತರಿಸಿದ ಅವರು, ಭವನ ನಿರ್ಮಿಸುವ ಜಾಗದಲ್ಲಿದ್ದ ಮರಗಳ ತೆರವು ಕಾರ್ಯವೂ ನಡೆಯುತ್ತಿದೆ ಎಂದರು.
ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಪಡೆದು ಉತ್ತಮ ರೀತಿಯ ಎರಡು ಅಂತಸ್ತಿನ ಭವನವನ್ನು ನಿರ್ಮಿಸಲಾಗುವುದು ಎಂದರು. ಭವನ ನಿರ್ಮಾಣವಾದ ನಂತರ ಬಾಬುಜಗಜೀವನರಾಂರವರ ಪುತ್ತಳಿಯನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಶೀಲ್ದಾರ್ ಮಮತಾ ಎಂ ಮಾತನಾಡಿ, ಪುರಸಭೆಯ ಮುಖ್ಯಾಧಿಕಾರಿಯು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಕೆಲವು ಸಮಸ್ಯೆಗಳನ್ನು ಬಗೆಹರಿಸಿಲ್ಲವೆಂದು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಎರಡು ಬಾರಿ ನೋಟಿಸ್ ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನೊಂದು ಸಭೆ ಕರೆಯಲಾಗುವುದು ಎಂದರು.
ರಾಜ್ಯ ಮಾದಿಗ ದಂಡೋರದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಮ್ಮ ಎಸ್.ಸಿ ಎಸ್.ಟಿ ಯ ಹಣವನ್ನು ಖರ್ಚು ಮಾಡಿರುವ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ನಿವೇಶನ ರಹಿತರಿಗೆ ಸರಿಯಾದ ರೀತಿಯಲ್ಲಿ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.
ಇದಕ್ಕೆ ಧ್ವನಿಗೂಡಿಸಿದ ಮುಖಂಡ ಗೋವಿಂದರಾಜು, ಸರ್ಕಾರದ ಅನುದಾನ ಬರದಿದ್ದರೂ ಸ್ಥಳೀಯವಾಗಿ ಬರುವಂತಹ ಪಂಚಾಯಿತಿಯ ಆದಾಯದಲ್ಲಿ ನಮ್ಮ ಎಸ್.ಸಿ ಎಸ್.ಟಿ ಭಾಗವನ್ನು ಸರಿಯಾಗಿ ನೀಡಬೇಕು ಎಂದರು.
ದಲಿತ ಮುಖಂಡ ಮಲ್ಲಿಕಾರ್ಜುನ್ ಮಾತನಾಡಿ, ಸಭೆ ನಡೆದು ಒಂಬತ್ತು ತಿಂಗಳು ಕಳೆದರೂ ನಮ್ಮ ಕುಂದು ಕೊರತೆ ಸಭೆ ನಡೆದಿಲ್ಲ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಲಿಂಗದೇವರು ಮಾತನಾಡಿ, ಪಟ್ಟಣದ ಹೊರವಲಯದಲ್ಲಿರುವ ಸ್ಮಶಾನದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಅಂತ್ಯಸಂಸ್ಕಾರವನ್ನು ಮಾಡಲು ತೊಂದರೆಯಾಗುತ್ತಿದೆ. ಆದ್ದರಿಂದ ಸೂಕ್ತವಾದ ವ್ಯವಸ್ಥೆ ಮಾಡಬೇಕಾಗಿದೆ ಹಾಗೂ ಪುರಸಭೆಯಲ್ಲಿರುವ ಪೌರಕಾರ್ಮಿಕರಿಗೆ ಅವರ ಕೆಲಸಗಳಿಗೆ ಅಗತ್ಯವಾದ ಉಪಕರಣಗಳನ್ನು ನೀಡಬೇಕಾಗಿರುವುದು ಪುರಸಭೆಯ ಜವಾಬ್ದಾರಿಯಾಗಿದೆ ಎಂದ ಅವರು ಪ್ರತಿದಿನ ಬೆಳಗಿನ ಉಪಹಾರವನ್ನು ಕೇವಲ 25 ಜನರು ತಿನ್ನುತ್ತಿದ್ದು ಟಿಫನ್ ಬಿಲ್ಲು 50 ಜನಕ್ಕೆ ಮಾಡಲಾಗಿದೆ. ಅವರು ನೀಡುವ ತಿಂಡಿಯು ಸರಿಯಾದ ರೀತಿಯಲ್ಲಿ ರುಚಿ ಶುಚಿ ಇರುವುದಿಲ್ಲ ಎಂದರು.
ಸಭೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಸಮಸ್ಯೆ, ಬಗರ್ಹುಕುಂ ಸಾಗುವಳಿದಾರರ ಖಾತೆ ಮಾಡುವ ಬಗ್ಗೆ, ಹುಳಿಯಾರಿನಲ್ಲಿ ವಾಲ್ಮೀಕಿ ಭವನ ನಿರ್ಮಿಸುವ ಬಗ್ಗೆ ಚರ್ಚೆಯಾಯಿತು. ಈ ಸಂದರ್ಭದಲ್ಲಿ ಗೌಡಗೆರೆ ಬಳಿಯಲ್ಲಿದ್ದ 20 ಅಲೆಮಾರಿ ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರವನ್ನು ವಿತರಿಸಲಾಯಿತು.
ಸಭೆಯಲ್ಲಿ ಮಾಜಿ ಜಿ.ಪಂ. ಅಧ್ಯಕ್ಷ ರಘುನಾಥ್, ದಲಿತ ಸಂಘಟನೆಯ ಮುಖಂಡರುಗಳಾದ ಗೋ.ನಿ.ವಸಂತ್ ಕುಮಾರ್, ಗಿರಿಯಪ್ಪ, ಶ್ರೀಧರ್, ಪ್ರವೀಣ್, ಯರೇ ಕಟ್ಟೆ ರಮೇಶ್, ರಾಜು ಬೆಳಗೆಹಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ನಾಯ್ಕ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




