‘ಮೆಟ್ರೊ ನಿಲ್ದಾಣಗಳಿಂದ ಶೀಘದ್ರಲ್ಲೇ ಮೀಟರ್ ಚಾಲಿತ ಆ್ಯಪ್ ಆಧಾರಿತ ಆಟೊ ಸೇವೆಗೆ ಚಾಲನೆ ನೀಡಲಾಗುವುದು’ ಎಂದು ಆಟೊ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದರು.
ನಗರದಲ್ಲಿ ಗುರುವಾರ ಬಿ. ಪ್ಯಾಕ್ ಮತ್ತು ಡಬ್ಲ್ಯೂಆರ್ಐ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ‘ಪರ್ಸನಲ್ ಟು ಪಬ್ಲಿಕ್ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಅಗಸ್ಟ್ 15ರಂದು ಮೆಟ್ರೊಮಿತ್ರಾ ಎಂಬ ಆ್ಯಪ್ ಆಧಾರಿತ ಸೇವೆಯನ್ನು ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು. ಚಾಲಕರನ್ನು ವೃತ್ತಿಪರರನ್ನಾಗಿ ಮಾಡಲು ಈಗಾಗಲೇ ತರಬೇತಿ ನೀಡುತ್ತಿದ್ದೇವೆ. ತಂತ್ರಜ್ಞಾನ ಮತ್ತು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವೆಚ್ಚ ಸರಿದೂಗಿಸಲು ಮೀಟರ್ ಶುಲ್ಕದ ಜತೆಗೆ 110 ಹೆಚ್ಚುವರಿಯಾಗಿ ನೀಡಬೇಕು’ ಎಂದು ಹೇಳಿದರು.
ಬಿ. ಪ್ಯಾಕ್ ಮುಖ್ಯಸ್ಥೆ ರೇವತಿ ಅಶೋಕ್, ‘ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಸಲುವಾಗಿ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ನಗರದ ಜನ ವಾರದಲ್ಲಿ ಎರಡು ದಿನ ಸಾರ್ವಜನಿಕ ಸಾರಿಗೆಗಳನ್ನು ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ವೈಟ್ ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಮಾರ್ಗ ಕಾರ್ಯಾರಂಭ ಮಾಡಲಿದೆ. ಈ ಪ್ರದೇಶದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಾರ್ವಜನಿಕ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಕಂಪನಿಗಳೂ ಭಾಗವಹಿಸುತ್ತಿವೆ’ ಎಂದು ತಿಳಿಸಿದರು.
ಡಬ್ಲ್ಯೂಆರ್ ಐನ ಶ್ರೀನಿವಾಸ್ ಅಲವಲ್ಲಿ, ‘ಮನೆಯಿಂದ ಮೆಟ್ರೊ ನಿಲ್ದಾಣಕ್ಕೆ ಹೋಗುವುದಕ್ಕೆ ಸಾರಿಗೆ ಸಂಪರ್ಕವಿಲ್ಲದ ಕಾರಣದ ಪ್ರಯಾಣಿಕರು ಸಾರ್ವಜನಿಕರ ಸಾರಿಗೆ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕುಂದುಕೊರತೆಗಳನ್ನು ಸರಿಪಡಿಸಲು ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. http://bit.ly/personal2public ones ಅಭಿಯಾನದಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಬಹುದು’ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


