ಕುಣಿಗಲ್: ಗುರು ವ್ಯಕ್ತಿಯನ್ನು ರೂಪಿಸಿದರೆ, ಪತ್ರಿಕಾ ಮಾಧ್ಯಮ ಇಡೀ ಸಮಾಜವನ್ನು ರೂಪಿಸುತ್ತದೆ, ಜನ ಸಾಮಾನ್ಯರ ಸಮಸ್ಯೆ ಅರಿತು ಸಮಾಜವನ್ನು ತಿದ್ದುವಂತಹ ಕೆಲಸ ಪತ್ರಿಕೆಗಳು ಮಾಡುತ್ತಿವೆ ಹೀಗಾಗಿ ಪತ್ರಿಕಾ ಮೌಲ್ಯಗಳು ಇಂದಿನ ಮಕ್ಕಳಿಗೆ ಮಹತ್ವದಾಗಿದೆ, ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಮತಾಮಣಿ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪತ್ರಿಕಾ ದಿನಾಚರಣೆ ಕೇವಲ ದಿನಾಚರಣೆಯಲ್ಲ ಸತ್ಯ, ಸ್ವಾತಂತ್ರ್ಯ ಸಾಮಾಜಿಕ, ಒಳ್ಳೆಯ ಸಂಕಲ್ಪದ ದಿನಾಚರಣೆಯಾಗಿದೆ, ಪತ್ರಿಕೆ ಸಮಾಜವನ್ನು ರೂಪಿಸುವಂತಹ ಗುರುತರವಾದ ಜವಾಬ್ದಾರಿ ಹೊಂದಿದೆ, ಸಮಾಜದಲ್ಲಿ ಶಿಕ್ಷಣ ಹಾಗೂ ಪತ್ರಿಕಾ ರಂಗ ಎರಡು ಕಣ್ಣುಗಳು ಇದ್ದ ಹಾಗೆ, ಸಮಾಜವನ್ನು ಬದಲಾಯಿಸುವಂತಹ ದೊಡ್ಡ ಶಕ್ತಿ ಲೇಖನಿ ಹೊಂದಿದೆ ಎಂದು ಹೇಳಿದರು.
ವೃತ್ತ ನಿರೀಕ್ಷಕ ಮಾದ್ಯಾ ನಾಯಕ್ ಮಾತನಾಡಿ, ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ಮಾಧ್ಯಮವನ್ನು ನಾಲ್ಕನೇ ಅಂಗವೆಂದು ಕರೆಯಲ್ಪಡುತ್ತಿದೆ, ಪತ್ರಿಕೆಗಳು ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಸಲ್ಲಿಸಿದ ಸೇವೆ ಅನನ್ಯವಾಗಿದೆ, ಸಾಮಾಜಿಕ ಜಾಲತಾಣದಿಂದ ಉದ್ಭವಿಸುವ ಹಲವು ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿವೆ, ತಂತ್ರಜ್ಞಾನವು ಹೊಸ ಸವಾಲುಗಳನ್ನು ಸೃಷ್ಟಿಸುತ್ತಿದ್ದು, ಅವುಗಳನ್ನು ಜವಾಬ್ದಾರಿಯುತ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಮಾತನಾಡಿ, ಈ ಹಿಂದೆ ಜನರು ಪತ್ರಿಕೆ ಓದುವ ಮೂಲಕ ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಿದ್ದರು ಆದರೆ ಇತ್ತೀಚೆಗೆ ಯುವ ಜನಾಂಗ ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಜ್ಞಾನದ ಸಂಪತ್ತನ್ನು ಕಳೆದುಕೊಳ್ಳುತ್ತಿರುವುದರಿಂದ ಪತ್ರಿಕೆ ಓದುಗರ ಸಂಖ್ಯೆ ಇಳಿಮುಖವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕು ಪತ್ರಿಕಾ ಸಂಘದ ಅಧ್ಯಕ್ಷ ಬಿಚ್ಚನಹಳ್ಳಿ ಶ್ರೀನಿವಾಸ್ ಮಾತನಾಡಿ, ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಪತ್ರಿಕಾ ರಂಗವನ್ನು ದುರ್ಬಳಕೆ ಮಾಡಿಕೊಂಡು ಅದನ್ನು ಕಲುಷಿತಗೊಳಿಸುವಂತಹ ಕೆಲಸ ಮಾಡುತ್ತಿದ್ದಾರೆ, ಅಂತಹ ನಕಲಿ ಪತ್ರಕರ್ತರಿಂದ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಕೆಟ್ಟ ಹೆಸರು ಬರುತ್ತಿದೆ ಹಾಗಾಗಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ನಕಲಿ ಪತ್ರಕರ್ತರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ್, ನಿರ್ದೇಶಕರಾದ ಬೆಳಗರೆ ಜಯಣ್ಣ, ಹೆಚ್.ಎಂ.ಅಶೋಕ್, ಪುರುಷೋತ್ತಮ್, ಶ್ರೀವತ್ಸ, ರಾಜ್ಯ ಸಮಿತಿ ಮಾಜಿ ಸದಸ್ಯ ಸಿದ್ದಲಿಂಗಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಎಂ.ಪಾರೀಷ್ಉಲ್ಲಾ, ಉಪಾಧ್ಯಕ್ಷ ಎಂ.ಡಿ.ಮೋಹನ್, ಕಾರ್ಯದರ್ಶಿ ಟಿ.ಹೆಚ್.ಆನಂದ್ಸಿಂಗ್ ಮತ್ತಿತರರು ಇದ್ದರು.
ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಪತ್ರಿಕೆ ಮಾಧ್ಯಮಗಳ ಕೊಡುಗೆ ಮರೆಯುವಂತದ್ದಲ್ಲ, ಸಮಾಜದಲ್ಲಿ ಘಟಿಸುವಂತಹ ಘಟನೆಗಳನ್ನು ಪತ್ರಕರ್ತರು ಸವಾಲಾಗಿ ಸ್ವೀಕರಿಸಿ ಎದೆಗುಂದದೇ ನಿಷ್ಪಕ್ಷಪಾತವಾಗಿ ಬರೆಯುವ ಮೂಲಕ ಸಮಾಜದ ಕಣ್ಣು ತೆರೆಸುತ್ತಿವೆ ಜೊತೆಗೆ ಜನರಲ್ಲಿ ಪ್ರಜ್ಞೆ ಮೂಡಿಸುವಲ್ಲಿ ಪತ್ರಿಕೆ ರಂಗ ಉತ್ತಮ ಕೆಲಸ ಮಾಡುತ್ತಿದೆ ಹೀಗಾಗಿ ದೂರ ದರ್ಶನ ಹಾಗೂ ಮೊಬೈಲ್ ಗೀಳು ಬಿಟ್ಟು ಪತ್ರಿಕೆಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.
| ಡಾ.ಕಪನಿಪಾಳ್ಯ ರಮೇಶ್, ಕಸಾಪ ಅಧ್ಯಕ್ಷ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


