ಬೆಂಗಳೂರು: ರೈತರಿಗೆ ಬೀಜ, ರಸಗೊಬ್ಬರ, ಕೀಟನಾಶಕ, ಮಣ್ಣು ಪರೀಕ್ಷೆ ಈ ರೀತಿ ಹಲವಾರು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ದೇಶದಾದ್ಯಂತ ಸುಮಾರು ಒಂದು ಲಕ್ಷ ಇಪ್ಪತೈದು ಸಾವಿರ (1.25) ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮ ಸ್ವಾಗತಾರ್ಹ ಮತ್ತು ಅವರಿಗೆ ರಾಜ್ಯದ ರೈತರ ಪರವಾಗಿ ಧನ್ಯವಾದಗಳು ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ಎಲ್ಲ ಕೇಂದ್ರಗಳಲ್ಲಿ ರೈತರಿಗೆ ಈ ರೀತಿ ಒಂದೇ ಸೂರಿನಡಿ ಹಲವಾರು ಸೇವೆಗಳ ಸೌಲಭ್ಯ ದೊರೆಯಲಿದೆ. ಈ ಸಮೃದ್ದಿ ಕೇಂದ್ರಗಳನ್ನು ದೇಶದ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ವಿಶ್ವವಿದ್ಯಾಲಯದೊಂದಿಗೆ ನೇರವಾಗಿ ಸಂಪರ್ಕ ಹೊಂದುವ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ರೈತರು ಸ್ಪರ್ಧೆ ಮಾಡುವ ದೃಷ್ಟಿಯಿಂದ ಅವರಿಗೆ ಬೇಕಾದ ಅಗತ್ಯ ತಾಂತ್ರಿಕ ಸಲಹೆಗಳು, ಉಳಿದ ಎಲ್ಲ ಸೌಲಭ್ಯಗಳನ್ನು ಈ ಕೇಂದ್ರದಡಿ ನೀಡಲು ಕ್ರಮ ವಹಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ಮುಂದೆ ಕೃಷಿ ಪದವೀಧರರು ಮಾತ್ರ ರಾಸಾಯನಿಕ ಗೊಬ್ಬರ ಮಾರಾಟಗಾgರಾಗಿ ಇರುತ್ತಾರೆ. ಈಗ ಇರುವಂತವರಿಗೆ ಅಗತ್ಯ ತರಬೇತಿಗಳನ್ನು ಕೊಡುವ ಮೂಲಕ ಅವರನ್ನು ಸಶಕ್ತರನ್ನಾಗಿ ಮಾಡಲಾಗುವುದು ಎಂದಿದ್ದಾರೆ.
ಹಲವಾರು ವರ್ಷಗಳಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ನಿರಂತರವಾಗಿ ಕೇಂದ್ರ ಸರ್ಕಾರ ನೀಡುತ್ತಿದೆ. 14ನೇ ಕಂತಿನ ಹಣವನ್ನು ರಾಜಸ್ಥಾನದ ಸಿಕರ್ನಲ್ಲಿ ದೇಶದ 8.50 ಕೋಟಿ ರೈತರ ಖಾತೆಗೆಳಿಗೆ 17,500 ಕೋಟಿ ರೂಪಾಯಿ ಜಮೆ ಮಾಡಿದರು. ರಾಜ್ಯದ 50.45 ಲಕ್ಷ ಅಧಿಕ ರೈತರಿಗೆ 1009.07 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೊದಲನೆಯ ಹಂತದಲ್ಲಿ ಬೇವುಲೇಪಿತ ಯೂರಿಯಾ ತಯಾರು ಮಾಡಿದರು. ಎರಡನೆಯ ಹಂತದಲ್ಲಿ ನ್ಯಾನೋ ಯೂರಿಯಾ ಕಂಡುಹಿಡಿದರು. ಮೂರನೆಯ ಹಂತದಲ್ಲಿ ಗಂಧಕ ಲೇಪಿತ ಯೂರಿಯಾವನ್ನು ಬಿಡುಗಡೆ ಮಾಡಿದ್ದಾರೆ. ಈ ರೀತಿ ನಿರಂತರವಾಗಿ ಕೃಷಿ ಕ್ಷೇತ್ರದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿ, ಅವುಗಳನ್ನು ಜಾರಿಗೆ ತರುವಂತಹ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ ಮತ್ತು ಇದು ರೈತರ ಬಗ್ಗೆ ಇರುವ ವಿಶೇಷ ಕಾಳಜಿಯನ್ನು ತೋರಿಸುತ್ತಿದೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


