ತುಮಕೂರು : ಮದುವೆ ಹೆಸರಲ್ಲಿ ಅವಿವಾಹಿತರನ್ನೇ ಟಾರ್ಗೆಟ್ ಮಾಡ್ತಿದ್ದ ತಂಡವನ್ನು ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.
ಸಂಪ್ರದಾಯದಂತೆ ಮದುವೆ ಮಾಡಿಕೊಂಡು ಹಣ–ಚಿನ್ನದೊಂದಿಗೆ ಪರಾರಿಯಾಗುತ್ತಿದ್ದರು. ತುಮಕೂರು ಸೇರಿದ್ದಂತೆ ರಾಜ್ಯದ ಹಲವು ಕಡೆ ಹಲವರನ್ನ ಯಾಮಾರಿಸಿದ್ದ ತಂಡವಾಗಿದೆ.
ಏನಿದು ಪ್ರಕರಣ?
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ನಡೆದ ದೋಖಾ ಮದುವೆ ಇದಾಗಿದೆ. ಪಾಲಾಕ್ಷ್ಯ ಎಂಬುವರು ಮಗನಿಗೆ ಮದುವೆ ಮಾಡಲು ಹರಸಾಹಸ ನಡೆಸಿದ್ದರು. ದಯಾನಂದಮೂರ್ತಿ ಗೆ 34 ವರ್ಷ ದಾಟಿದ್ರೂ ಹೆಣ್ಣು ಸಿಗದೆ ನೊಂದಿದ್ದರು. ಅನೇಕ ಕಡೆ ಹೆಣ್ಣು ಹುಡುಕಿದ್ರೂ ಕಂಕಣ ಭಾಗ್ಯ ಕೂಡಿಬಂದಿರಲಿಲ್ಲ.
ಹತ್ತಾರು ಮದುವೆ ಬ್ರೋಕರ್ ಗಳ ಮೂಲಕ ಹೆಣ್ಣು ಹುಡುಕಿಸಿದ್ದ ಪಾಲಾಕ್ಷ್ಯ, ಕುಷ್ಟಗಿ ಮೂಲದ ಬಸವರಾಜು ಮೂಲಕ ಲಕ್ಷ್ಮಿ ಎಂಬಾಕೆಯ ಪರಿಚಯವಾಗಿತ್ತು. ಮದುವೆ ಬ್ರೋಕರ್ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಬಳಿ ಮಗನಿಗೆ ಹೆಣ್ಣು ತೋರಿಸುವಂತೆ ಪಾಲಾಕ್ಷ್ಯ ಕೇಳಿಕೊಂಡಿದ್ದರು .
ಇವರ ಪರಿಸ್ಥಿತಿ ನೋಡಿ ಮೋಸ ಮಾಡುವ ತೀರ್ಮಾನ ಮಾಡಿದ ಲಕ್ಷ್ಮೀ, ಹುಬ್ಬಳ್ಳಿಯಲ್ಲಿ ಒಬ್ಬ ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ–ತಾಯಿ ಇಲ್ಲ ನೀವೆ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಳು.
ಕೋಮಲ ಎಂಬ ಹೆಸರಿನಲ್ಲಿ ಯುವತಿಯ ಪೋಟೋ ತೋರಿಸಿದ್ದ ಲಕ್ಷ್ಮಿ. ಗಂಡಿನ ಮನೆ ನೋಡಲು ಅತ್ತಿಕಟ್ಟೆ ಗ್ರಾಮಕ್ಕೆ ಬಂದಿದ್ದ ಯುವತಿ ಜೊತೆಗೆ ಚಿಕ್ಕಮ್ಮ–ಚಿಕ್ಕಪ್ಪ, ಕಳೆದ ವರ್ಷ ನವೆಂಬರ್ 11 ನೇ ತಾರೀಕು ಅತ್ತಿಗಟ್ಟೆಗೆ ಬಂದಿದ್ದ ನಕಲಿ ಕುಟುಂಬವು ಅಂದೆ ಮದುವೆ ಮಾತುಕತೆ ನಡೆಸಿತ್ತು.
ಮರುದಿನವೇ ಮದುವೆ ಮಾಡಿ ಮುಗಿಸಿದ ಎರಡು ಕುಟುಂಬ, ಮಗನಿಗೆ ಹೆಣ್ಣು ಸಿಗದೆ ಹೈರಾಣಾಗಿದ್ದ ದಯಾನಂದ ಮೂರ್ತಿ ಕುಟುಂಬ ದಿಢೀರ್ ಮದುವೆ ಒಪ್ಪಿಕೊಂಡು ಗ್ರಾಮದಲ್ಲಿ ಮದುವೆ ಮಾಡಿದ್ದರು.
ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದೂ ಮುಂದು ಯೋಚಿಸದೆ ಮದುವೆ ಮಾಡಿದ ಪಾಲಾಕ್ಷ್ಯ. ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿ ಮುಗಿಸಿದ್ದರು.
ಮದುವೆಗೆ ಸುಮಾರು 200ಕ್ಕೂ ಹೆಚ್ಚು ಜನರು ಸೇರಿದ್ದರು. ಹೆಣ್ಣಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ನೀಡಿದ್ದ ಪಾಲಾಕ್ಷ್ಯ 25 ಗ್ರಾಂ ಚಿನ್ನಾಭರಣ ಹಾಕಲಾಗಿತ್ತು. ಹೆಣ್ಣು ತೋರಿಸಿದ ಬ್ರೋಕರ್ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು.
ಹೆಣ್ಣಿನ ಕಡೆಯವರು ಅಂತ 8 ಜನರನ್ನ ಕರೆ ತಂದಿದ್ದ ಬ್ರೋಕರ್ ಲಕ್ಷ್ಮೀ. ಮದುವೆ ಮುಗಿದ ಎರಡು ದಿನದ ನಂತರ ಸಂಪ್ರದಾಯದ ಕಾರಣ ನೀಡಿ ಯುವತಿಯೊಬ್ಬಳನ್ನೇ ವಾಪಸ್ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಹಣ–ಚಿನ್ನದ ಒಡವೆ ಸಹಿತ ಮದುಮಗಳನ್ನ ಕರೆದುಕೊಂಡು ಹೋಗಿದ್ದರು.
ವಾರ ಕಳೆದರೂ ಮದುಮಗಳು ವಾಪಸ್ ಬಂದಿರಲಿಲ್ಲ. ಆತಂಕಗೊಂಡ ಪಾಲಾಕ್ಷ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲು ಆಗಿದೆ. ನಡೆದದ್ದು ನಕಲಿ ಮದುವೆ ಬಂದವರು ದೋಖಾ ಗಿರಾಕಿಗಳು ಎಂಬ ಸತ್ಯ ಬಯಲಾಗಿದೆ.
ವಾಪಸ್ ಗುಬ್ಬಿಗೆ ಬಂದ ಪಾಲಕ್ಷ್ಯ ಎಲ್ಲಾರ ವಿರುದ್ಧ ಪೊಲೀಸ್ ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ನಿರಂತರ ತನಿಖೆ ನಡೆಸಿದ್ದರು.
ಒಂದು ವರ್ಷದಿಂದ ಈ ಕುಟುಂಬ ತಲೆ ಮರೆಸಿಕೊಂಡಿತ್ತು, ಇದೀಗ ಮಹಾರಾಷ್ಟ್ರ, ಹುಬ್ಬಳ್ಳಿ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.
ಮದುವೆ ಹೆಸರಲ್ಲಿ ದೋಖಾ ಮಾಡಲು ನಕಲಿ ಆಧಾರ್ ಕಾರ್ಡ್ ಸೃಷ್ಟಿ, ಮದುವೆ ಹೆಸರಲ್ಲಿ ವಂಚನೆ ಮಾಡುವುದನ್ನೇ ಈ ತಂಡ ವೃತ್ತಿ ಮಾಡಿಕೊಂಡಿತ್ತು. ಇದಕ್ಕಾಗಿ ನಕಲಿ ಅಡ್ರೆಸ್ ನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಳ್ಳುತ್ತಿದ್ದರು.
ಆಧಾರ್ ಕಾರ್ಡ್ ತೋರಿಸಿ ಗಂಡಿನ ಮನೆಯವರನ್ನ ನಂಬಿಸುತ್ತಿದ್ದರು. ನಾಲ್ವರಿಗೂ ಹೆಚ್ಚು ಜನರಿಗೆ ಮದುವೆ ಹೆಸರಿನಲ್ಲಿ ದೋಖಾ ಮಾಡಿದ್ದ ಗ್ಯಾಂಗ್. ಮೂರು ವರ್ಷದಲ್ಲಿ ನಾಲ್ಕು ಮದುವೆ ಮಾಡಿ ಮೋಸ ಮಾಡಿದೆ.
ಸಂಪ್ರದಾಯದಂತೆ ಮದುವೆ ಮಾಡಿಸಿ ನಂಬಿಸಿ ಮೋಸ ಮಾಡಿದ ಬ್ರೋಕರ್ ಇಡೀ ಪ್ರಕರಣದ ಸೂತ್ರಧಾರಿಯಾಗಿದ್ದನು. ಮದುಮಗಳಿಗೆ ಈಗಾಗ್ಲೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಚಿಕ್ಕಪ್ಪ-ಚಿಕ್ಕಮ್ಮನ ಹೆಸರಿನಲ್ಲಿ ಬಂದಿದ್ದ ನಕಲಿಗಳನ್ನು ಗುಬ್ಬಿ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


