ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ದಬ್ಬೇಘಟ್ಟದಲ್ಲಿ ವಾಸಿಸುತ್ತಿದ್ದ ಅಲೆಮಾರಿ ಸಮುದಾಯದ ಬದುಕು ಬಿರುಗಾಳಿಯ ಆರ್ಭಟಕ್ಕೆ ತತ್ತರಿಸಿದ್ದು, ಸಂಕಷ್ಟದಲ್ಲಿದ್ದ ಕುಟುಂಬಗಳನ್ನು ತಾಲ್ಲೂಕು ಆಡಳಿತವು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.
ದಬ್ಬೇಘಟ್ಟದ ಬಯಲು ಪ್ರದೇಶದಲ್ಲಿ ಟಾರ್ಪಲ್ ಟೆಂಟ್ಗಳನ್ನು ಹಾಕಿಕೊಂಡು ಕಳೆದ ಹಲವು ತಿಂಗಳುಗಳಿಂದ ಅಲೆಮಾರಿ ಕುಟುಂಬಗಳು ವಾಸಿಸುತ್ತಿದ್ದವು. ಮಂಗಳವಾರ ಸಂಜೆ ಬೀಸಿದ ಅನಿರೀಕ್ಷಿತ ಬಿರುಗಾಳಿಗೆ ಈ ಹಂಗಾಮಿ ಆಶ್ರಯ ತಾಣಗಳು ಸಂಪೂರ್ಣವಾಗಿ ಹಾರಿಹೋಗಿವೆ. ಇದರಿಂದಾಗಿ ವೃದ್ಧರು ಹಾಗೂ ಮಕ್ಕಳು ಆಶ್ರಯವಿಲ್ಲದೆ ಬೀದಿಗೆ ಬಿದ್ದಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಮಮತಾ ಎಂ. ಅವರು ಸಂತ್ರಸ್ತ ಕುಟುಂಬಗಳನ್ನು ಪಟ್ಟಣದ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಲು ತಕ್ಷಣದ ಕ್ರಮ ಕೈಗೊಂಡರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಸಂತ್ರಸ್ತರ ಅಹವಾಲು ಆಲಿಸಿದರು. ಬಳಿಕ ಮಾತನಾಡಿದ ಅವರು: ”ಈ ಹಿಂದೆ ಗುಂಡುತೋಪಿನಲ್ಲಿ ವಾಸವಿದ್ದ ಈ ಕುಟುಂಬಗಳಿಗೆ ದಬ್ಬೇಘಟ್ಟದ ಬಳಿ ಜಾಗ ಗುರುತಿಸಲಾಗಿತ್ತು, ನಿವೇಶನ ಹಂಚಿಕೆ ಮತ್ತು ಮನೆ ಮಂಜೂರಾತಿ ಪ್ರಕ್ರಿಯೆಯಲ್ಲಿ ಕೆಲವು ತಾಂತ್ರಿಕ ಅಡಚಣೆಗಳಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು,” ಎಂದು ಭರವಸೆ ನೀಡಿದರು.
ತಹಶೀಲ್ದಾರ್ ಮಮತಾ ಮಾತನಾಡಿ, “ಅಲೆಮಾರಿ ಕುಟುಂಬಗಳಿಗಾಗಿ ಈಗಾಗಲೇ ಜಾಗ ಕಾಯ್ದಿರಿಸಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಿ ಅರ್ಹರಿಗೆ ಶೀಘ್ರದಲ್ಲೇ ನಿವೇಶನ ಹಂಚಲಾಗುವುದು. ಸದ್ಯಕ್ಕೆ ಅವರಿಗೆ ತಾತ್ಕಾಲಿಕ ವಸತಿ ಹಾಗೂ ಆಹಾರದ ವ್ಯವಸ್ಥೆ ಮಾಡಲಾಗಿದೆ” ಎಂದರು.
ಮೃತ ಪುಟ್ಟಯ್ಯ ಕುಟುಂಬಕ್ಕೆ ₹5 ಲಕ್ಷ ಪರಿಹಾರ:
ಇದೇ ಸಂದರ್ಭದಲ್ಲಿ, ಮಂಗಳವಾರ ಸಂಜೆ ಸುರಿದ ಮಳೆ–ಗಾಳಿಯಿಂದಾಗಿ ತೋಟದಲ್ಲಿ ಮರದ ಕೊಂಬೆ ಬಿದ್ದು ಮೃತಪಟ್ಟಿದ್ದ ಪುಟ್ಟಯ್ಯ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ವಿತರಿಸಲಾಯಿತು. ಪ್ರಕೃತಿ ವಿಕೋಪದಡಿ ಮಂಜೂರಾದ ₹5 ಲಕ್ಷದ ಪರಿಹಾರದ ಪತ್ರವನ್ನು ಶಾಸಕ ಸಿ.ಬಿ. ಸುರೇಶ್ ಬಾಬು ಹಾಗೂ ತಹಶೀಲ್ದಾರ್ ಮಮತಾ ಎಂ ಅವರು ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


