ಬೆಂಗಳೂರು: ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಬಿ.ಕೆ. ಶ್ರೀನಿವಾಸ್ (ಬೆಂ.ಕೋ.ಶ್ರೀ) ಅವರ ಸಿನಿಮಾ ಜಗತ್ತಿನ ಪಯಣ, ವ್ಯಾಪಾರ, ಹೋರಾಟ ಹಾಗೂ ಅವರ ಅಜೇಯ ಮನೋಬಲದ ಯಶೋಗಾಥೆಯನ್ನು ಒಳಗೊಂಡ ‘ಬಿ.ಕೆ.ಶ್ರೀನಿವಾಸ ಒಂದು ಅಸಾಮಾನ್ಯ ಜೀವನಯಾನ’ ಪುಸ್ತಕದ ಬಿಡುಗಡೆ ಸಮಾರಂಭವು ನಗರದ ಗಾಂಧಿ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಕೆ.ವಿ. ಚಂದ್ರಶೇಖರ್, ಸಾ.ರಾ. ಗೋವಿಂದು, ಹಿರಿಯ ಪತ್ರಕರ್ತ ಜೋಗಿ, ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ತಮ್ಮ ಜೀವನದ ಹಾದಿಯನ್ನು ನೆನೆದು ಭಾವುಕರಾಗಿ ಮಾತನಾಡಿದ ಬೆಂಕೋಶ್ರೀ, “ನಾನು ಕಡುಬಡತನದ ಕುಟುಂಬದಿಂದ ಬಂದವನು. ಗುಡಿಸಲಿನಲ್ಲಿ ಹುಟ್ಟಿ, ಕೇವಲ 9ನೇ ತರಗತಿಯವರೆಗೆ ಮಾತ್ರ ಓದಿದ ನನಗೆ ಸಿನಿಮಾದ ಮೇಲೆ ಅಪಾರ ಹುಚ್ಚಿತ್ತು. ಆ ಸಿನಿಮಾ ವ್ಯಾಮೋಹದಲ್ಲೇ ಗಳಿಸಿದ್ದರಲ್ಲಿ ಸ್ವಲ್ಪವನ್ನು ಕಳೆದುಕೊಂಡೆ. ಆರು ವರ್ಷಗಳ ಹಿಂದೆ ನನಗೆ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀಗಳ ಭೇಟಿಯಾಗಿತ್ತು, ಇಂದು ಅವರೇ ಇಲ್ಲಿಗೆ ಬಂದು ನನ್ನನ್ನು ಆಶೀರ್ವದಿಸುತ್ತಿರುವುದು ನನ್ನ ಸೌಭಾಗ್ಯ” ಎಂದು ತಮ್ಮ ಹಳೆಯ ದಿನಗಳನ್ನು ಬಿಚ್ಚಿಟ್ಟರು.
ಪತ್ರಕರ್ತ ಜೋಗಿ ಮಾತನಾಡಿ, “ಬೆಂಕೋಶ್ರೀ ಅವರ ಸಿನಿಮಾಗಳನ್ನು ನೋಡಿ ನಾವು ಅದರ ಬಗ್ಗೆ ಬರೆದಿದ್ದೇವೆ. ಅವರು ಕೇವಲ ‘ಹಾಲು ಶ್ರೀನಿವಾಸ್’ ಅಲ್ಲ, ಬದಲಿಗೆ ಎಲ್ಲವನ್ನೂ ಒಳಗೊಂಡ ‘ಆಲ್ ಶ್ರೀನಿವಾಸ್’. ಒಳ್ಳೆಯ ಸಿನಿಮಾಗಳನ್ನು ಮಾಡುವುದು ಅವರ ಫ್ಯಾಷನ್ ಆಗಿತ್ತು. ಅವರ ಸಾಧನೆ ನಿಜಕ್ಕೂ ದೊಡ್ಡದು” ಎಂದು ಬಣ್ಣಿಸಿದರು.
ಸಾ.ರಾ. ಗೋವಿಂದು ಮಾತನಾಡಿ, “ಶ್ರೀನಿವಾಸ್ ಅವರು ತಳಮಟ್ಟದಿಂದ ಬೆಳೆದು ಬಂದವರು. ಹಿಂದೆ ನಾನು ಡಾ. ರಾಜ್ಕುಮಾರ್ ಅವರ ಹತ್ತು ಸಾವಿರ ಅಭಿಮಾನಿಗಳ ಸಂಘವನ್ನು ಕಟ್ಟಿದಾಗ, ಇವರೂ ಸುರ್ವೆ ಅವರ ಜೊತೆಗೂಡಿ ಅಭಿಮಾನಿ ಸಂಘ ಮಾಡಿದ್ದರು. ಇವರ ಅಂದಿನ ಚಟುವಟಿಕೆಗಳನ್ನು ನೋಡಿದಾಗಲೇ ಇವರು ಮುಂದೆ ದೊಡ್ಡ ವ್ಯಕ್ತಿಯಾಗುತ್ತಾರೆ ಎಂದುಕೊಂಡಿದ್ದೆ. ಇವರು ನನ್ನ ಮಗನನ್ನು ಮೊದಲ ಬಾರಿಗೆ ಹೀರೊ ಮಾಡಿದ್ದರು. ಚಿತ್ರರಂಗ ಇವರನ್ನು ಕೈಹಿಡಿಯದಿದ್ದರೂ, ಇವರು ಆ ನೋವನ್ನು ಎಲ್ಲೂ ತೋಡಿಕೊಳ್ಳದೆ ಮುನ್ನಡೆದರು” ಎಂದರು.
ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ಮಾತನಾಡಿ, “ಬೆಂಕೋಶ್ರೀ ಅವರು ನಮ್ಮೆಲ್ಲರಿಗೂ ದೊಡ್ಡ ಸ್ಫೂರ್ತಿ. ಹೆಚ್ಚಾಗಿ ಓದಲು ಬಾರದ ಒಬ್ಬ ವ್ಯಕ್ತಿ, ಇಂದು ತಮ್ಮ ಜೀವನದ ಗಾಥೆಯನ್ನು ನಾವೆಲ್ಲರೂ ಓದುವಂತೆ ಮಾಡಿರುವುದು ಅವರ ಅಸಾಮಾನ್ಯ ಸಾಧನೆಗೆ ಸಾಕ್ಷಿ” ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಪೂಜ್ಯ ಶ್ರೀಗಳು ನೆರೆದಿದ್ದ ಸಭಿಕರಿಗೆ ಮತ್ತು ಪುಸ್ತಕದ ಯಶಸ್ಸಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
—




