ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಬಂಜಾರ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿತ್ತು ಆದರೆ ಇಂದಿನ ಬಿಜೆಪಿ ಸರ್ಕಾರ ಬಂಜಾರ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ನಮ್ಮ ಕರ್ನಾಟಕ ರಾಜ್ಯದ ಬಂಜಾರ ಸಮುದಾಯದ ತಾಂಡಗಳಲ್ಲಿರುವ ಅರ್ಚಕರಿಗೆ ಮಾಸಿಕ ರೂ. 10,000/- ಗಳಂತೆ ಗೌರವಧನ ನೀಡಬೇಕು ಎಂದು ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ಪತ್ರ ಬರೆದಿದ್ದೇನೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ,
ತೆಲಂಗಾಣ ರಾಜ್ಯ ಸರ್ಕಾರವು ಅಲ್ಲಿನ ಬಂಜಾರ ಸಮುದಾಯದವರ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡು ತಾಂಡಗಳಲ್ಲಿನ ವಿವಿಧ ದೇವಾಲಯಗಳ ಆರ್ಚಕರಿಗೆ “ಧೂಪ, ದೀಪ, ನೈವೇದ್ಯಮ್” ಯೋಜನೆ ರೂಪಿಸಿ ಮಾಸಿಕ ಗೌರವಧನ ನೀಡಲಾಗುತ್ತಿದೆ. ಅದೇ ರೀತಿ ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಸಾವಿರಾರು ಬಂಜಾರ ತಾಂಡಾಗಳ ಆರಾಧ್ಯ ದೇವರುಗಳ ದೇವಸ್ಥಾನಗಳಲ್ಲಿ ಪೂಜೆ, ಅರ್ಚನೆ, ಭಜನೆ ಮುಂತಾದ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುತ್ತಾರೆ. ಆದರೆ ಇಲ್ಲಿನ ತಾಂಡಾಗಳ ಅರ್ಚಕರುಗಳು ಸೌಲಭ್ಯ ವಂಚಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣ ಇಲಾಖೆ, ತಾಂಡಾ ಅಭಿವೃದ್ಧಿ ನಿಗಮ, ಅಥವಾ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಮೂಲಕ ಕರ್ನಾಟಕದಲ್ಲಿರುವ ಬಂಜಾರ ಸಮಾಜದವರ ಸಾವಿರಾರು ತಾಂಡಾಗಳಲ್ಲಿರುವ ಅರ್ಚಕರಿಗೆ ಮಾಸಿಕ ರೂ. 10,000/- ಗಳಂತೆ ಗೌರವಧನ ನೀಡಲು, ವಿಶೇಷ ಯೋಜನೆ ರೂಪಿಸಿ ಸಹಸ್ರಾರು ಬಂಜಾರ ಸಮಾಜದವರಿಗೆ ಸೌಲಭ್ಯ ಕಲ್ಪಸುವಂತೆ ಮಾನ್ಯ ಸಚಿವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy