ಸರಗೂರು: ಅರ್ಹ ಫಲಾನುಭವಿಗಳಿಗೆ ಸಾಗುವಾಳಿ ಪತ್ರಗಳನ್ನು ವಿತರಿಸುವುದು ಸರ್ಕಾರದ ಮುಖ್ಯ ಬದ್ಧತೆಯಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಸಾಗುವಾಳಿ ಪತ್ರವು ಗ್ರಾಮೀಣ ಭಾಗದ ಬಡ ಹಾಗೂ ರೈತ ಕುಟುಂಬಗಳ ಬದುಕಿಗೆ ಶಕ್ತಿ ಮತ್ತು ಭದ್ರತೆಯನ್ನು ನೀಡುವ ಅತ್ಯಂತ ಮಹತ್ವದ ದಾಖಲೆಯಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಹಾಗೂ ಭೂಮಿಯ ಮೇಲಿನ ಹಕ್ಕನ್ನು ಕಾನೂನುಬದ್ಧವಾಗಿ ಸ್ಥಾಪಿಸಲು ಇದು ಸಹಕಾರಿಯಾಗಿದೆ,” ಎಂದು ಶಾಸಕರು ಹೇಳಿದರು.
ಅರ್ಹರಿಗೆ ಪಾರದರ್ಶಕ ಹಾಗೂ ಶೀಘ್ರ ರೀತಿಯಲ್ಲಿ ಸಾಗುವಾಳಿ ಪತ್ರ ವಿತರಿಸಲು ಸರ್ಕಾರ ಬದ್ಧವಾಗಿದೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಬಾಕಿ ಉಳಿದಿರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು.
ಜಾತಿ, ಆದಾಯ ಪ್ರಮಾಣಪತ್ರ ಹಾಗೂ ಆರ್ಟಿಸಿ ಪಡೆಯಲು ಸಾರ್ವಜನಿಕರು ಮತ್ತು ರೈತರು ತಮ್ಮ ಕೂಲಿ ಕೆಲಸ ಬಿಟ್ಟು ತಹಸೀಲ್ದಾರ್ ಕಚೇರಿಗೆ ಅಲೆಯುತ್ತಿರುವ ದೂರುಗಳು ಸಾರ್ವಜನಿಕರಿಂದ ಹಾಗೂ ಪಕ್ಷದ ಮುಖಂಡರಿಂದ ಬಂದಿವೆ. “ಜನರು ಕಚೇರಿಗೆ ಬಂದರೂ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಇನ್ಮುಂದೆ ಸಾರ್ವಜನಿಕರನ್ನು ಅಥವಾ ರೈತರನ್ನು ಕಚೇರಿಗೆ ಅಲೆದಾಡಿಸುವ ವಿಷಯ ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದರು.
ಜೊತೆಗೆ, ಜಾತಿ ಪ್ರಮಾಣಪತ್ರ ವಿತರಣೆಯನ್ನು ಸುಲಭಗೊಳಿಸಲು ತಹಸೀಲ್ದಾರ್ ಕಚೇರಿಯಲ್ಲಿ ಮತ್ತೊಂದು ಕೌಂಟರ್ ತೆರೆಯುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್ ಮೋಹನಕುಮಾರಿ, “ಸರ್ಕಾರದ ವಿವಿಧ ಸೌಲಭ್ಯಗಳು ಅರ್ಹರಿಗೆ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸಾಗುವಾಳಿ ಪತ್ರವು ರೈತರ ಭೂಹಕ್ಕನ್ನು ಅಧಿಕೃತಗೊಳಿಸುವುದರ ಜೊತೆಗೆ ಬ್ಯಾಂಕ್ ಸಾಲ ಪಡೆಯಲು ಉಪಯುಕ್ತವಾಗಿದೆ. ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿ ಇಲಾಖೆಗೆ ಸಹಕರಿಸಿದರೆ ವಿತರಣಾ ಪ್ರಕ್ರಿಯೆ ಇನ್ನಷ್ಟು ವೇಗಗೊಳ್ಳಲಿದೆ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸ್ವಾಮಿ, ಸದಸ್ಯ ಚೆಲುವ ಕೃಷ್ಣ, ಮಾಜಿ ಜಿ.ಪಂ. ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ, ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಗ್ಯಾರಂಟಿ ಸಮಿತಿ ಸದಸ್ಯ ಚಲುವರಾಜು, ಕಸಾಪ ಅಧ್ಯಕ್ಷ ಕೆಂಡಗ್ಗಣಸ್ವಾಮಿ, ನಾಗರಾಜು, ಪ್ರಭು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


