ಬೆಂಗಳೂರು: ಕೃಷಿ ಅಭಿವೃದ್ಧಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯವು ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸಿರುವ ಈ ಬೃಹತ್ ಕೃಷಿಮೇಳ ದೇಶದಲ್ಲಿ ಮಾದರಿಯಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಕೃಷಿಮೇಳ — 2024ರ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಮೇಳಕ್ಕೆ ಭೇಟಿ ನೀಡಿದ ರೈತರು ತಾವು ನೋಡಿದ ಕೃಷಿ ತಾಂತ್ರಿಕತೆಗಳು, ತಳಿಗಳ ಬಗ್ಗೆ ಇನ್ನು ಹತ್ತು ರೈತರಿಗೆ ಮಾಹಿತಿಯನ್ನು ರವಾನಿಸಿದಾಗ ಮಾತ್ರ ಈ ಮೇಳಕ್ಕೆ ಒಂದು ಅರ್ಥಸಿಗುತ್ತದೆ. ಈ ಮೇಳದಲ್ಲಿ ಕೃಷಿಯಲ್ಲಿ ನಿರತರಾದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವುದು ಅಭಿನಂದನಾರ್ಹ ಎಂದರು.
ನಮ್ಮ ಯುವಜನತೆ ಡಿಜಿಟಲ್ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಕೃಷಿಯಲ್ಲಿ ಕ್ರಾಂತಿಯನ್ನು ತರಬೇಕಾಗಿದೆ. ಕೃಷಿಯಲ್ಲಿ ಹೆಚ್ಚಿನ ಮಾಹಿತಿ, ತಂತ್ರಜ್ಞಾನದ ಬಳಕೆಯಿಂದಾಗಿ ಇತರೆ ದೇಶಗಳು ಸಹ ನಮ್ಮ ಆಧುನಿಕ ಕೃಷಿಯನ್ನು ಹೊಗಳುವಂತಾಗಿದೆ. ಈ ವೇದಿಕೆಯಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ, ತಂತ್ರಜ್ಞಾನ, ಪರಿಕರಗಳು ಮತ್ತು ರುಚಿಯಾದ ಹಳ್ಳಿಯ ಸೊಗಡಿನ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿರುವುದು ಸಂತಸದ ವಿಷಯ. ಈ ನಾಲ್ಕು ದಿನಗಳ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿರುವ ಕೃಷಿ ವಿಶ್ವವಿದ್ಯಾನಿಲಯದ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಎಸ್.ವಿ. ಸುರೇಶ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸಿರುವ 4 ದಿನಗಳ ಕೃಷಿಮೇಳ-2024 ಅಭೂತ ಪೂರ್ವಯಶಸ್ಸಿಗೆ ಸಾಕ್ಷಿಯಾಗಿದೆ. ಡಿಜಿಟಲ್ ಕೃಷಿಯು ಭವಿಷ್ಯದ ಕೃಷಿಗೆ ಮುನ್ನುಡಿ, ಡಿಜಿಟಲ್ ತಂತ್ರಜ್ಞಾನಗಳಾದ ಕೃತಕ ಬುದ್ದಿಮತ್ತೆ, ಡ್ರೋನ್ಗಳ ಅಳವಡಿಕೆ, ಹವಾಮಾನ ಆಧಾರಿತ ಕೃಷಿಯು ಆಹಾರ ಉತ್ಪದನೆಯನ್ನು ಹೆಚ್ಚಿಸುವುದರ ಜೊತೆಗೆ ರೈತರನ್ನು ಆರ್ಥಿಕವಾಗಿ ಸಧÀೃಡರನ್ನಾಗಿ ಮಾಡಬಲ್ಲದು. ಮುಂದಿನ ದಿನಗಳಲ್ಲಿ ಡಿಜಿಟಲ್ ಕೃಷಿಯನ್ನು ಕೃಷಿ ಯಂತ್ರದಾರೆಗೆ ಅಳವಡಿಸಲು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಮಾದ್ಯಮ ಮಿತ್ರರು, ರೈತರು ಮತ್ತು ಸಾರ್ವಜನಿಕರು ಸಹಕಾರದಿಂದ ಈ ಕೃಷಿಮೇಳ ಯಶಸ್ವಿಯಾಗಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ತಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪ್ರಗತಿಪರ ರೈತ ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು ಹಾಗೂ ರಾಜ್ಯ ಮಟ್ಟದ ಡಾ.ಎಂ. ಹೆಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ, ಡಾ.ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತೆ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ: ಕೆ.ಸಿ. ನಾರಾಯಣಸ್ವಾಮಿ, ಸಂಶೋದನಾ ನಿರ್ದೇಶಕರಾದ ಡಾ: ಹೆಚ್.ಎಸ್. ಶಿವರಾಮು ಡಾ: ವೈ.ಎನ್. ಶಿವಲಿಂಗಯ್ಯ, ವಿಸ್ತರಣಾ ನಿರ್ದೇಶಕರು ಮತ್ತು ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಡಾ: ಟಿಕೆ. ಪ್ರಭಾಕರ ಶೆಟ್ಟಿ, ಹೆಚ್,ಎಲ್. ಹರೀಶ್, ಬಿ.ಎಸ್.ಉಲ್ಲಾಸ್, ಎನ್.ದಿನೇಶ್ ಮತ್ತು ಡಾ: ಎಂ. ಚಂದ್ರೇಗೌಡ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q