ಬೀದರ್: ಮೂವರು ಅಂತರ ರಾಜ್ಯ ಎಟಿಎಂ ದರೋಡೆಕೋರರನ್ನು ಮಂಗಳವಾರ ಬೀದರ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಎಟಿಎಂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ 7 ಆರೋಪಿಗಳ ಪೈಕಿ ಹರ್ಯಾಣ ರಾಜ್ಯದ ಶಾಹಿದ್ ಕಮಲ್ ಖಾನ್ , ರಿಹಾನ್ ಅಕ್ಷ ಖಾನ್ ಹಾಗೂ ಇಲಿಯಾಸ್ ಅಬ್ದುಲ್ ರೆಹಮಾನ್ ಎಂಬವರನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡ 4 ಜನ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ . ನಗರದಲ್ಲಿ ಮಂಗಳವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ 8 ಕಡೆ, ನೆರೆಯ ತೆಲಂಗಾಣದ 1 ಕಡೆ ಮತ್ತು ಮಹಾರಾಷ್ಟ್ರದ 3 ಕಡೆ ಎಟಿಎಂನಿಂದ ಹಣ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಬೀದರ್ ಜಿಲ್ಲೆಯ ಹಳ್ಳಿಖೇಡ್ -ಬಿ, ಬಸವಕಲ್ಯಾಣ, ಚಿಟಗುಪ್ಪ, ವಿಜಯಪುರ ಜಿಲ್ಲೆಯ 2 ಕಡೆ ಮತ್ತು ಬೆಳಗಾವಿಯ ಯಮಕನಮರಡಿ, ಅಂಕಲಿ, ಚಿಕ್ಕೋಡಿ ಸೇರಿದಂತೆ ಒಟ್ಟು 8 ಕಡೆ ಮತ್ತು ನೆರೆಯ ತೆಲಂಗಾಣದ ಸದಾಶಿವಪೇಟ, ಮಹಾರಾಷ್ಟ್ರದ ಉಮರ್ಗಾ ಮತ್ತು ಮುರುಮ ಸೇರಿದಂತೆ 4 ಕಡೆ ಒಟ್ಟು 12 ಎಟಿಎಂಗಳಲ್ಲಿ 1.58 ಕೋಟಿ ರೂಪಾಯಿಗಳನ್ನು ಈ ಗ್ಯಾಂಗ್ ಕದ್ದು ಪರಾರಿಯಾಗಿತ್ತು.
ಬಂಧಿತರಿಂದ 19.50 ಲಕ್ಷ ನಗದು , ಬಿಳಿ ಬಣ್ಣದ ಕ್ರೆಟಾ ಕಾರು ಜಪ್ತಿ ಮಾಡಲಾಗಿದೆ . ಆರೋಪಿಗಳು ಗೂಗಲ್ ಮ್ಯಾಪ್ ಸಹಾಯದಿಂದ ಟೋಲ್ ಗೇಟ್ ಇಲ್ಲದ ರಸ್ತೆಯಲ್ಲಿ ನಕಲಿ ನಂಬರ್ ಪ್ಲೇಟ್ ಇರುವ ಕಾರು ಬಳಸಿ ಗ್ಯಾಸ್ ವೆಲ್ಲಿಂಗ್ ಮೂಲಕ ಎಟಿಎಂ ಕತ್ತರಿಸಿ ಕೃತ್ಯ ಎಸಗುತ್ತಿದ್ದರು ಎಂದು ಚನ್ನಬಸವಣ್ಣ ವಿವರಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ , ಜೆ.ಎಸ್.ನ್ಯಾಮೇಗೌಡ , ಸಿಪಿಐ ಹನುಮರೆಡ್ಡಿ ಹಾಜರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್


