ತುಮಕೂರು: ಶುಕ್ರವಾರವಷ್ಟೇ ನಿಧನರಾದ ತುಮಕೂರು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಎಂ.ಆರ್. ಮಮತಾರವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.
ಮೆದುಳು ರಕ್ತಸ್ರಾವದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಶುಕ್ರವಾರ ನಿಧನರಾಗಿದ್ದರು. ಮೃತರ ಗೌರವಾರ್ಥವಾಗಿ ನಗರದ ಪತ್ರಿಕಾಭವನದಲ್ಲಿ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನುಆಯೋಜಿಸಲಾಗಿದ್ದು, ನೆರೆದಿದ್ದ ಪತ್ರಕರ್ತರು ಮಮತಾರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂತಾಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಮಮತಾರವರು ಅತ್ಯಂತ ಸ್ನೇಹ ಪೂರ್ವಕವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರತಿಯೊಬ್ಬರೊಂದಿಗೆ ಪ್ರೀತಿಯಿಂದ ಹಾಗೂ ಆತ್ಮೀಯತೆಯರಾಗಿ ವರ್ತಿಸುತ್ತಾ ತಮ್ಮ ಕೆಲಸ ನಿರ್ವಹಿಸುತ್ತಿದ್ದರು. ಅವರು ಇತ್ತೀಚೆಗೆ ತಮ್ಮಅನಾರೋಗ್ಯದ ಬಗ್ಗೆ ಪತ್ರಕರ್ತ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು.
ಆದರೆ ಇಷ್ಟು ಬೇಗ ಸಾವು ಅವರನ್ನು ಅಪ್ಪಿಕೊಳ್ಳತ್ತದೆ ಎಂಬುದನ್ನು ಊಹಿಸಿರಲಿಲ್ಲ. ಈ ಹಿಂದಿನ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ರವರೂ ಸಹ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ವಾರ್ತಾ ಇಲಾಖೆಗೆ ಗ್ರಹಣ ಹಿಡಿದಂತಾಗಿದೆ ಎಂದು ನುಡಿದರು.
ಈ ವೇಳೆ ಸಂತಾಪ ಸೂಚಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ಎಸ್.ನಾಗಣ್ಣ ಅವರು ವಾರ್ತಾ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತ ಮಾಧ್ಯಮದ ನಡುವಿನ ಸಂಪರ್ಕಕೊಂಡಿ. ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳು ಅತ್ಯಂತ ಹೆಚ್ಚಿನಒತ್ತಡದಲ್ಲಿಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಸಿಬ್ಬಂದಿ ಕೊರತೆಯು ಇದಕ್ಕೆ ಕಾರಣವಾಗಿದೆ. . ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಮಾಧ್ಯಮದವರು ಸಲಹೆ ರೂಪದಲ್ಲಿ ಅಧಿಕಾರಿಗಳೊಡನೆ ಸಂವಹನ ಸಾಧಿಸಬೇಕು ಎಂದು ತಿಳಿಸಿ, ಮಮತಾ ಹಾಗೂ ಮಂಜುನಾಥ್ ಈ ಇಬ್ಬರು ಅಧಿಕಾರಿಗಳ ನಿಧನ ತುಂಬಲಾರದ ನಷ್ಟ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಮೋಹನ್ ಕುಮಾರ್ ಅವರು ಮಮತಾರವರು ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದರು, ಆದರೆ ಅವರ ಅನಾರೋಗ್ಯ ಅವರನ್ನು ಕರ್ತವ್ಯ ನಿರ್ವಹಿಸಲು ಅನುಮತಿಸುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಶ್ರದ್ಧಾಂಜಲಿ ಅರ್ಪಿಸಿದ ಕಲಾಶ್ರೀ ಡಾ.ಲಕ್ಷ್ಮಣ್ದಾಸ್ ಮೃತರಗುಣಗಾನ ಮಾಡಿ ಅವರ ಆತ್ಮಕ್ಕೆ ಸದ್ಗತಿದೊರೆಯಲಿ ಎಂದು ತಿಳಿಸಿದರು.
ಸಭೆಯಲ್ಲಿ ಗೃಹಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣಅವರು ಮಾತನಾಡಿ, ಸರ್ಕಾರ ಮತ್ತು ಮಾಧ್ಯಮಗಳ ನಡುವಿನ ಸಂವಹನಕಾರರಾಗಿದ್ದ ಮಮತಾ ಅವರ ನಿಧನ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ನುಡಿನಮನ ಸಲ್ಲಿಸಿ ಮಾತನಾಡಿ, ಜಿಲ್ಲಾಡಳಿತದ ಹಲವು ಸಭೆಗಳಲ್ಲಿ ಅವರೊಂದಿಗೆ ಭಾಗಿಯಾಗಿದ್ದೆ. ಸಭೆಗಳಲ್ಲಿ ಮೌನಿಯಾಗಿದ್ದರೂ ಕರಾರುವಕ್ಕಾಗಿ ಸುದ್ದಿಗಳನ್ನು ಮಾಧ್ಯಮ ಮಿತ್ರರಿಗೆ ತಲುಪಿಸುತ್ತಿದ್ದರು. ಸಂದಭ೯ದಲ್ಲಿ ಒತ್ತಡದಲ್ಲಿ ಇರುತ್ತಿದ್ದುದನ್ನು ಗಮನಿಸಿದ್ದೆ. ವಿಧಿಯಾಟಕ್ಕೆ ಬಲಿಯಾಗಿದ್ದು ದುರಂತ ಎಂದು ಸ್ಮರಿಸಿದರು.
ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಂ, ಹರೀಶ್ಆಚಾರ್ಯ, ನುಡಿನಮನ ಸಲ್ಲಿಸಿದರು. ರಾಷ್ಟ್ರೀಯ ಮಂಡಳಿ ಸದಸ್ಯ ಅನು ಶಾಂತರಾಜು, ನಿರ್ದೇಶಕರುಗಳಾದ ಜಯಣ್ಣ, ಶಂಕರ್, ಚಿಕ್ಕಣ್ಣ, ರೇಣುಕಾ ಪ್ರಸಾದ್ ಕಾಗ್ಗೆರೆ ಸುರೇಶ್, ಮಾಜಿ ನಿರ್ದೇಶಕ ಕೊಂತಿಹಳ್ಳಿ ರಂಗನಾಥ್ , ನರಸಿಂಹ, ಸುರೇಶ್, ವೀರಪ್ಪ, ರವಿ, ಕಸಾಪದಚಿಕ್ಕ ಬೆಳ್ಳಾವಿ ಶಿವಕುಮಾರ್, ಕನ್ನಡ ಸಂಸ್ಕೃತಿ ಇಲಾಖೆ ಯ ಸುರೇಶ್ ಸೇರಿದಂತೆ ಹಿರಿಯ, ಯುವ ಪತ್ರಕರ್ತರು ಉಪಸ್ಥಿತರಿದ್ದರು. ಎರಡು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296