ಗುಬ್ಬಿ: ಸಮಸ್ಯೆಗಳ ಅರ್ಜಿ ನೀಡುವ ಮುಗ್ದ ಜನರಿಗೆ ನಿಮ್ಮ ಹಂತದಲ್ಲಿ ಇತ್ಯರ್ಥವಾಗದ ಬಗ್ಗೆ ಮಾಹಿತಿ ನೀಡಿ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಈ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾಡಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ತಾಲ್ಲೂಕಿನ ಕಸಬ ಹೋಬಳಿ ಎಸ್.ಕೊಡಗೀಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹು ನಿರೀಕ್ಷೆಯ ಈ ಕಾರ್ಯಕ್ರಮ ಯಶಸ್ಸು ಕಾಣಲು ಮೊದಲು ರೈತರ ಅರ್ಜಿಗೆ ಸ್ಥಳದಲ್ಲೇ ಪರಿಹಾರ ಕೊಡಬೇಕು. ನಿಗದಿತ 30 ದಿನದಲ್ಲಿ ಸಾರ್ವಜನಿಕ ಕೆಲಸ ಮಾಡಲೇಬೇಕು ಎಂದರು.
ಹಿಂದೆ ಸರ್ಕಾರಿ ಕಾರ್ಯಕ್ರಮ ಯಶಸ್ವಿ ಸಾಧಿಸುವಲ್ಲಿ ವಿಫಲವಾದ ನಿದರ್ಶನವಿದೆ. ಇಡೀ ತಾಲ್ಲೂಕು ಆಡಳಿತವೇ ಹಳ್ಳಿಯಲ್ಲಿ ವಾಸ್ತವ್ಯ ಹೂಡುವ ವೇದಿಕೆಯಲ್ಲಿ ಸಮಸ್ಯೆಗೆ ಉತ್ತರ ನೀಡಿ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಬಗೆಹರಿಸುವ ಕೆಲಸ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕಾರ್ಯಕ್ರಮ ಸದ್ಬಳಕೆ ಮಾಡಿಕೊಂಡು ಜನರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕರೆ ನೀಡಿದ ಅವರು ಈ ಹಿಂದೆ ತಾಳೆಕೊಪ್ಪ ಗ್ರಾಮದಲ್ಲಿ ನಡೆದ ಇದೇ ಕಾರ್ಯಕ್ರಮದಲ್ಲಿ ಸೂಕ್ತವಾದ ಉತ್ತರ ಸಿಗದ ಜನರು ನನ್ನ ಬಳಿ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಉತ್ತರ ನೀಡಿ ಹಿಂಬರಹ ನೀಡುವ ಕೆಲಸ ಮಾಡಲು ಸೂಚಿಸಿದರು.
ಎಲ್ಲಾ ಇಲಾಖಾಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜನರ ಸಮಸ್ಯೆಗೆ ಉತ್ತರ ನೀಡಲಾಗುವುದು. ಬಂದ ಅರ್ಜಿಗೆ 30 ದಿನದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು. ಈ ಜೊತೆಗೆ ಸಾರ್ವಜನಿಕ ಸಮಸ್ಯೆಗೂ ಅರ್ಜಿ ನೀಡಬಹುದು. ಸ್ಮಶಾನ, ಸರ್ಕಾರಿ ಜಾಗ ಒತ್ತುವರಿ ಸೇರಿದಂತೆ ಇನ್ನಿತರ ಅರ್ಜಿ ನೀಡಬಹುದು ಎಂದರು.
ನಂತರ ಇಲಾಖಾವಾರು ಸಮಸ್ಯೆ ಆಲಿಸಲು ಅನುವು ಮಾಡಲಾಗಿ ಬೆಸ್ಕಾಂ ಇಲಾಖೆಯ ಬಗ್ಗೆ ಅತ್ಯಧಿಕ ದೂರುಗಳು ಕೇಳಿಬಂದಿತ್ತು. ರೈತ ಸಂಘವು ಈ ಇಲಾಖೆ ವಿರುದ್ಧ ಸಾಕಷ್ಟು ದೂರು ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಅವರು ಸಮಸ್ಯೆ ವಿವರಿಸುತ್ತಿದ್ದರು.
ಉಪವಿಭಾಗಾಧಿಕಾರಿ ಅಜಯ್ ಮಾತಿನ ಭರದಲ್ಲಿ ಪ್ರಚೋದನೆ ಮಾಡಬೇಡಿ ಎಂದು ಹೇಳಿದ ತಕ್ಷಣವೇ ಪ್ರತಿಕ್ರಿಯೆ ನೀಡಿದ ಗೋವಿಂದರಾಜು 40 ವರ್ಷದಿಂದ ರೈತಪರ ಹೋರಾಟ ಮಾಡಿದ ನಮ್ಮನ್ನು ಪ್ರಚೋದನೆ ಮಾಡುವವರು ಎಂದಿದ್ದು ತಪ್ಪು ಎಂದು ಕಿಡಿಕಾರಿದರು.
ಕೂಡಲೇ ಉಪವಿಭಾಗಾಧಿಕಾರಿ ಅಜಯ್ ನನ್ನ ಮಾತಿನಿಂದ ನೋವು ಆಗಿದ್ದಲ್ಲಿ ಕ್ಷಮೆಯಿರಲಿ ಎಂದು ಪರಿಸ್ಥಿತಿ ತಿಳಿಗೊಳಿಸಿದರು.
ನಂತರ ತಾಪಂ ವತಿಯೊಂದು ಉದ್ಯೋಗ ಖಾತ್ರಿ ಯೋಜನೆಯ ದುಡಿಯೋಣ ಬಾ ಅಭಿಯಾನ ಬಗ್ಗೆ ಪ್ರಚುರ ಪಡಿಸಲಾಯಿತು. ವೃದ್ಯಾಪ್ಯ ವೇತನ, ಅಂಗವಿಕಲರ ವೇತನ ಇನ್ನಿತರ ಯೋಜನೆಯ ಒಟ್ಟು 32 ಮಂದಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಯಿತು. ಆರೋಗ್ಯ ಇಲಾಖೆ ಕೋವಿಡ್ ಬೂಸ್ಟರ್ ಡೋಸ್ ಮತ್ತು ಮಧುಮೇಹ, ರಕ್ತದೊತ್ತಡ ಪರೀಕ್ಷೆಯ ಶಿಬಿರವನ್ನು ಆಯೋಜಿಸಿತ್ತು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5