ಮಧುಗಿರಿ : ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ‘ನಮ್ಮ ಮನೆ ಸೇವಾ ಟ್ರಸ್ಟ್’ ವತಿಯಿಂದ ನೇತ್ರ ತಪಾಸಣಾ, ಕಣ್ಣಿನ ಶಸ್ತ್ರ ಚಿಕಿತ್ಸಾ ತಪಾಸಣಾ ಹಾಗೂ ಉಚಿತ ಕನ್ನಡ ವಿತರಣಾ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಎಲ್ಲಾ ಜನಾಂಗವನ್ನು ಒಳಪಟ್ಟು ಶಿಬಿರದಲ್ಲಿ 260 ಮಂದಿಗೆ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರ ನೀಡಿದರು. ಉಚಿತ ಕಣ್ಣಿನ ಪೊರೆ ತಪಾಸಣೆ ನಡೆಸಿ ಕನ್ನಡಕ ಅವಶ್ಯಕತೆ ಇರುವವರಿಗೆ ಈ ದಿನ ಒಟ್ಟಾರೆ 162 ಉಚಿತ ಕನ್ನಡಕ ಸ್ಥಳದಲ್ಲೇ ವಿತರಿಸಲಾಯಿತು ಮತ್ತು 42 ಜನರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವುಳ್ಳವರಿಗೆ ನಿಗದಿತ ದಿನಾಂಕಕ್ಕೆ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರ ಚಿಕಿತ್ಸೆ ಮಾಡಿಸಲು ನಿರ್ಧರಿಸಲಾಗಿದೆ.
ಮನುಷ್ಯನಿಗೆ ಎಲ್ಲ ಸಂಪತ್ತು ಇದ್ದರೂ ಅದನ್ನು ಸವಿಯಬೇಕಾದರೆ ಆರೋಗ್ಯ ಉತ್ತಮವಾಗಿರಬೇಕು. ಪ್ರಪಂಚ ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಸೂಕ್ಷ್ಮ ಅಂಗ ಕಣ್ಣು ಬದುಕಿಗೆ ಬೆಳಕಾಗಿರಬೇಕಾದರೆ ಹಿರಿಯರಿಗೆ ಮಕ್ಕಳು ಇಂತಹ ಉಚಿತ ತಪಾಸಣೆಗೆ ಕರೆತರುವ ಮೂಲಕ ಹಿರಿಯರ ಸೇವೆಗೆ ಬದ್ದರಾಗಿರಬೇಕು ಎಂದು ಟ್ರಸ್ಟ್ ನ ಅಧ್ಯಕ್ಷರಾದ ಮೊಹಮ್ಮದ್ ಬಿಲಾಲ್ ಸಲಹೆ ನೀಡಿದರು.
ಇಂದಿನ ಒತ್ತಡದ ಜೀವನ, ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಲ್ಲಾ ಒಂದು ವೈಪರೀತ್ಯ ಕಾಣುತ್ತಿದ್ದೇವೆ. ಪ್ರತಿಯೊಬ್ಬರು ಎರಡು ಮೂರು ತಿಂಗಳಿಗೆ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದ ಆರೋಗ್ಯ ರಕ್ಷಣೆಯ ಜತೆಗೆ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದರು.
ಟ್ರಸ್ಟ್ ನ ಕಾರ್ಯದರ್ಶಿಯಾದ ಇಮ್ತಿಯಾಜ್ ಪಾಶ ಮಾತನಾಡಿ, ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗ. ಇದನ್ನು ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಬಡ ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಅನುಕೂಲವಾಗಿವೆ. ಕಣ್ಣಿನ ದೃಷ್ಟಿ ಎಲ್ಲರಿಗೂ ಮಹತ್ವದ್ದು ಅದರಲ್ಲೂ ವಿಶೇಷವಾಗಿ ವಯೋವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಪೊರೆಗೆ ತುತ್ತಾಗುತ್ತಿದ್ದಾರೆ. ನಿತ್ಯ ಜೀವನದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಅನುಕೂಲ ಕಲ್ಪಿಸಲು ನಾವು ಈ ಶಿಬಿರವನ್ನು ಆಯೋಜಿಸಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟನ ಉಪಾಧ್ಯಕ್ಷರಾದ ಯಾಸ್ಮಿನ್ ತಾಜ್ , ಸಹಕಾರಿದರ್ಶಿ ಮಹಮದ್ ಅಬಿದ್ ಅಲಿ, ನಿರ್ದೇಶಕರಾದ ಊರೂಜ್ ಪಾಶ, ರಿಯಾಜ್ ಟ್ರಸ್ಟ್ ನ ಸದಸ್ಯರಾದ ಹಸೀನಾ ಬೇಗಂ ಮೊಹಮ್ಮದ್ ಜಾಕಿರ್ ಹುಸೇನ್, ಅಬ್ದುಲ್ ಖುದ್ದೂಸ್, ನವಾಬ್ ಜಾನ್, ಮೊಹಮ್ಮದ್ ರಫೀಕ್, ಜಾವೀದ್ ಹುಸೇನ್,ಟೈಲರ್ ಮುನ್ನ, ರಫೀಕ್ ಪಾಷಾ, ಆಫ್ತಾಬ್ ಪಾಷಾ, ಹಾಗೂ ಎಲ್ಲಾ ಸದಸ್ಯರು ಇದ್ದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1