ಮಧುಗಿರಿ: ಅಧಿಕಾರವಿದ್ದರೂ ಕೂಡ ಜನಪರ ಕೆಲಸಗಳು ಮಾಡದ ಇಬ್ಬರು ಮಾಜಿ ಶಾಸಕರನ್ನು ಮನೆಗೆ ಕಳುಹಿಸಲು ಕ್ಷೇತ್ರದ ಜನತೆ ಮುಂದಾಗಬೇಕಾಗಿದೆ ಎಂದು ಸ್ಥಳೀಯ ಬಿಜೆಪಿ ಅಭ್ಯರ್ಥಿ ಎಲ್.ಸಿ. ನಾಗರಾಜ್ ಕರೆ ನೀಡಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರವು ತೀರ ಬಡಪೀಡಿತ ಪ್ರದೇಶವಾಗಿದ್ದು, ಈ ಭಾಗದಲ್ಲಿ ರೈತಾಪಿ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಮಳೆಯನ್ನೆ ಆಧರಿಸಿ ಇಲ್ಲ ಬೋರ್ವೆಲ್ ನೀರನ್ನು ಆಧರಿಸಿ ಬೆಳೆನಟ್ಟಿ ಜೀವನ ಮಾಡುವ ಪರಿಸ್ಥಿತಿ ರೈತರಿಗೆ ಹಲವಾರು ವರ್ಷಗಳಿಂದ ಎದುರಾಗಿದೆ. 90ರ ದಶಕದ ನಂತರದಿಂದ ಇಲ್ಲಿಯವರೆಗೂ ಮಳೆ ಕೈಕೊಟ್ಟ ಸಂದರ್ಭದಲ್ಲಿ ಭೂಮಿಯಲ್ಲಿ ವ್ಯವಸಾಯ ಮಾಡಲು ಆಗದಿರುವ ಸಂದರ್ಭ ವಲಸೆ ಹೋಗುವ ಪ್ರಕ್ರಿಯ ಮಧುಗಿರಿಯಲ್ಲಿ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆ ಅಡಿಯ 19 ಟಿಎಂಸಿ ನೀರು ಲಭ್ಯವಿದ್ದು ಇದನ್ನು ಬಳಸಿಕೊಂಡು ಬಯಲು ಸೀಮೆ ಭಾಗದ ಜನರಿಗಾಗಿ ಶಾಶ್ವತ ಶುದ್ಧ ನೀರು ಕೊಡುವ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸುತ್ತೇನೆ ಎಂದು ಸ್ಥಳೀಯ ಬಿಜೆಪಿ ಅಭ್ಯರ್ಥಿ ಎಲ್ ಸಿ ನಾಗರಾಜ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭರವಸೆ ನೀಡಿದರು.
ಕ್ಷೇತ್ರದಲ್ಲಿ ಟೆಕ್ಸ್ ಟೈಲ್ಸ್ ಪಾರ್ಕ್ ಸ್ಥಾಪಿಸಿ ದುಡಿಯುವ ಸಾವಿರಾರು ಸ್ಥಳೀಯರಿಗೆ ಉದ್ಯೋಗ ನೀಡಬಹುದಾಗಿತ್ತು, ರೈತಪಿ ವರ್ಗ ಹೈನುಗಾರಿಕೆಗೆ ಅವಲಂಬಿತರಾಗಿದ್ದು, ರಾಸುಗಳಿಗೆ ಅನಾರೋಗ್ಯವಾದರೂ ಪಟ್ಟಣದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಬಂದು ತಪಾಸಣೆಗೆ ಒಳಪಡಿಸಬೇಕಾಗಿದೆ, ಪ್ರತಿ ಹೋಬಳಿ ಕೇಂದ್ರಗಳಲ್ಲೂ ಸಂಚಾರಿ ಪಶು ಆಸ್ಪತ್ರೆ ವ್ಯವಸ್ಥೆ ಮಾಡಿದ್ದರೆ ಸಾವಿರಾರು ದನ ಕರುಗಳು ಅನಾರೋಗ್ಯದಿಂದ ಸಾವಿಗೀಡಾಗುವುದನ್ನು ತಪ್ಪಿಸಬಹುದಾಗಿತ್ತು, ಇಂತಹ ಸಣ್ಣ ಜನಪರ ಕಾರ್ಯಗಳನ್ನು ಕೂಡ ಮಾಜಿ ಶಾಸಕರು ಮಾಡಿಲ್ಲ ಹಾಗೂ ಈ ಭಾಗದ ಹಲವಾರು ಸರ್ಕಾರಿ ಶಾಲೆಗಳ ಕೊಠಡಿಗಳು ಶಿತಿಲ ವ್ಯವಸ್ಥೆಯಲ್ಲಿದ್ದು ಶಾಲೆಗಳ ಅಭಿವೃದ್ಧಿ ಕೂಡ ಆಗಿಲ್ಲ ಎಂದು ಟೀಕಿಸಿದರು.
ಈ ಹಿಂದೆ ನಾನು ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಐಎಂಎ ಹಗರಣದಲ್ಲಿ ಲಂಚ ಪಡೆದಿದ್ದೇನೆಂದು ಆ ಪ್ರಕರಣದಲ್ಲಿ ಸಿಲುಕಿಸಲು ಕೆಲವರು ಸದ್ಯಂತರ ರೂಪಿಸಿದ್ದರು ಈ ಪ್ರಕರಣ ನ್ಯಾಯಾಲಯದಲ್ಲಿದ್ದು ನನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮಧುಗಿರಿ ಜಿಲ್ಲಾ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಎಲ್.ಸಿ.ನಾಗರಾಜ್ ಅವರಿಗೆ ಟಿಕೆಟ್ ಕೊಟ್ಟು ಸ್ಥಳೀಯರಿಗೆ ಆದ್ಯತೆ ನೀಡುವ ಮಾತನ್ನು ಬಿಜೆಪಿ ಪಕ್ಷ ಉಳಿಸಿಕೊಂಡಿದೆ, ನಮ್ಮ ಪಕ್ಷದ ಕಾರ್ಯಕರ್ತರು ಪಣತೊಟ್ಟು ಸ್ಥಳೀಯ ಅಭ್ಯರ್ಥಿ ನಾಗರಾಜ್ ರವರನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಕಮಲ ಹಾರಿಸಬೇಕು ಎಂದು ಕರೆ ನೀಡಿದರು.
ನಾಗರಾಜ್ ರವರು ಕ್ಷೇತ್ರದಲ್ಲಿ ಈ ಹಿಂದೆ ಹಲವಾರು ವರ್ಷಗಳಿಂದ ಜನಸೇವೆ ಮಾಡುತ್ತ ಬಂದಿದ್ದಾರೆ ಇವರಿಗೆ ಜನಪರ ಸೇವೆಯ ಅನುಭವ ಸಾಕಷ್ಟು ಇದೆ ಇಂತಹ ವ್ಯಕ್ತಿಯ ಗೆಲುವು ಕ್ಷೇತ್ರದ ಅಭಿವೃದ್ಧಿಗೆ ತೀರಾ ಅನಿವಾರ್ಯವಾಗಿದೆ,ಕಾಂಗ್ರೆಸ್ ಪಕ್ಷ ಮತದಾರರಿಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದು ಆ ಪಕ್ಷ ಅಧಿಕಾರಕ್ಕೆ ಬರುವುದೇ ಗ್ಯಾರಂಟಿ ಇಲ್ಲ ಎಂದರ್ಥ ಆದ್ದರಿಂದ ಕಾರ್ಡ್ ನೀಡುವ ಮೂಲಕ ಪರಿಚಯಿಸಿಕೊಳ್ಳುತ್ತಿದೆ ಎಂದರು.
ಬಿಜೆಪಿ ಮಂಡಳ ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ ಮಾತನಾಡಿ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಸ್ಥಳೀಯ ಅಭ್ಯರ್ಥಿ ಹಾಗೂ ಕ್ಷೇತ್ರದ ಮಗನಾದ ಎಲ್ ಸಿ ನಾಗರಾಜ್ ಅವರನ್ನು ಭಾರೀ ಬಹುಮತಗಳ ಅಂತರದಿಂದ ಗೆಲ್ಲಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಾವಗಡ ರವಿ, ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾದ ಇಮ್ತಿಯಾಜ್ ಪಾಷಾ, ಜಯಣ್ಣ ಕಾರ್ಯಾಲಯ ಕಾರ್ಯದರ್ಶಿ ಎಂ.ಸುರೇಶ್ ರೈತ ಮೋರ್ಚದ ನಾಗರಾಜಪ್ಪ, ಅಲ್ಪಸಂಖ್ಯಾತರ ಮಂಡಲ ಅಧ್ಯಕ್ಷರಾದ ರಿಯಾಜ್, ಯುವ ಮೋರ್ಚಾದ ಮಾಲಿ ಭರತ್, ಕಾರ್ತಿಕ್ ಆರಾಧ್ಯ ಎಸ್ ಸಿ ಮೋರ್ಚದ ಕಂಬದ ರಂಗಪ್ಪ, ಆರ್ ರವಿ ಮಹಿಳಾ ಮೋರ್ಚಾದ ಲತಾ ಪ್ರದೀಪ್, ಕಲ್ಪನಾ ಗೋವಿಂದರಾಜು ರತ್ನ ವೆಂಕಟಪ್ಪ ಕಾರ್ಯದರ್ಶಿ ನಾಗೇಂದ್ರ, ಸೀತಾರಾಮ್ ಉಸ್ತುವಾರಿ ರವೀಶ್, ಪಿ ಎಲ್ ಡಿ ಬ್ಯಾಂಕ್ ಒಬಳಾರೆಡ್ಡಿ, ಪಿ ಜಿ ಗೋವಿಂದರಾಜು ಹಾಗೂ ಬಹು ಸಂಖ್ಯದಲ್ಲಿ ಪಕ್ಷದ ಕಾರ್ಯಕರ್ತರು ಇದ್ದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy