ಪಾವಗಡ: ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳನ್ನು ತೆರೆದು ಗುಣಮಟ್ಟದ ವಿದ್ಯಾಭ್ಯಾಸ ನೀಡುವ ಸಲುವಾಗಿ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ಆದರೆ ಇಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ನಾನಾ ಕಷ್ಟಗಳನ್ನು ಅನುಭವಿಸುವಂತಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ತಾಲ್ಲೂಕಿನ ವೆಂಕಟಾಪುರ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಸರ್ಕಾರ ನೀಡುವ ಸೌಲಭ್ಯಗಳು ಸಿಗದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇಂದಿರಾ ಗಾಂಧಿ ವಸತಿ (ಪ್ರ.ವರ್ಗ) ಶಾಲೆಯ ವಿದ್ಯಾರ್ಥಿ ಕೊಠಡಿಗಳು ಹಾಗೂ ಶೌಚಾಲಯಗಳು ದುರ್ವಾಸನೆ ಬೀರುತ್ತಿವೆ, ಶಾಲೆ ಪ್ರಾರಂಭವಾಗಿ ಒಂದು ತಿಂಗಳಾಗಿದೆ, ಮಕ್ಕಳಿಗೆ ಬೆಡ್, ದಿನಚರಿ ಕಿಟ್ ನೀಡಿಲ್ಲ, ವಸತಿ ಕೊಠಡಿಗಳಲ್ಲಿ ಫ್ಯಾನ್ ಕೆಲವು ಕೆಟ್ಟು ನಿಂತಿದ್ದರೂ ವಸತಿ ಶಾಲೆಯ ಪ್ರಾಂಶುಪಾಲರು ಮಾತ್ರ ನಿರ್ಲಕ್ಷ್ಯ ಭಾವನೆ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಸತಿ ಶಾಲೆಯ ಅಕ್ಕ ಪಕ್ಕದಲ್ಲಿ ಗಿಡ ಗಂಟೆಗಳು ಬೆಳೆದು ಸೊಳ್ಳೆಗಳ ತಾಣವಾಗಿದೆ. ಒಳಗೆ ಮತ್ತು ಹೊರಗೆ ಸ್ವಚ್ಛತೆಯಿಲ್ಲದ ಕಾರಣ ರೋಗರುಜನಗಳಿಗೆ ತುತ್ತಾಗುವುದರಲ್ಲಿ ಯಾವುದೇ ಸಂಶಯವಿಲ್ಲ, 5-6 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆ ಕೊಟ್ಟಿಲ್ಲ. ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ ಸರ್ಕಾರದಿಂದ ಬಂದಿಲ್ಲ, ಹೆಣ್ಣು ಮಕ್ಕಳಿಗೆ ಹಿಂದಿನ ವರ್ಷ ಬಂದಿದ್ದ ಸೊಳ್ಳೆ ಪರದೆ ಕೊಟ್ಟಿದ್ದೇವೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದ ಊಟ ಗುಣಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ಇಲ್ಲಿ ಮಾತ್ರ ರುಚಿಯಿಲ್ಲದ ಊಟ ನೀಡುತ್ತಿದ್ದಾರೆ. 220 ವಿದ್ಯಾರ್ಥಿಗಳು ಇದ್ದು, ಶನಿವಾರ ಮಾತ್ರ 120 ಜನ ಮಕ್ಕಳು ಹಾಜರಿದ್ದರು. ಕಡಿಮೆ ಮಕ್ಕಳು ಇದ್ದರೂ ಸಹ ಅನ್ನ ಸಾಂಬಾರ್ ರುಚಿಯಿರಲಿಲ್ಲ. ಅಡುಗೆಯವರನ್ನು ಕೇಳಿದಾಗ ವಾರ್ಡನ್ ಕೊಟ್ಟರೆ ನಾವು ಮಾಡುತ್ತೇವೆ ಸಾರ್ ಎಂದು ಹೇಳುತ್ತಿದ್ದಾರೆ.
ಇಲ್ಲಿನ ವಸತಿ ಶಾಲಿಗಿಂತ ಸರ್ಕಾರಿ ಶಾಲೆಗಳೇ ಮೇಲು:
ವಸತಿ ನಿಲಯಗಳಿಗೆ ಬೇಡಿಕೆ ಇದೆ, ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಬೇಕು ಎಂಬ ದೃಷ್ಟಿಯಲ್ಲಿ ತಂದೆ ತಾಯಿಗಳು ಮೊರಾರ್ಜಿ ವಸತಿ ಶಾಲೆಗಳಿಗೆ ಸೇರಿಸಲು ಹರಸಾಹಸ ಪಟ್ಟು ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಮಕ್ಕಳ ಕಾಲ ಹರಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿರಾ ಗಾಂಧಿ ವಸತಿ ಶಾಲೆ(ಪರಿಶಿಷ್ಟ ಪಂಗಡ) ಮಕ್ಕಳ ಮೀಸಲಾತಿ ವಸತಿ ಶಾಲೆಯಲ್ಲಿ 220 ವಿದ್ಯಾರ್ಥಿಗಳಿದ್ದು, ಇಷ್ಟು ಜನ ಮಕ್ಕಳಿಗೂ 4 ಜನ ಶಿಕ್ಷಕರಿದ್ದಾರೆ, ಕಂಪ್ಯೂಟರ್ ಶಿಕ್ಷಕರಿಲ್ಲದೆ ಕಂಪ್ಯೂಟರ್ಗಳು ಧೂಳು ಹಿಡಿದಿವೆ, ಆಟದ ಉಪಕರಣಗಳನ್ನು ಕೊಠಡಿಯಲ್ಲಿ ಕೂಡಿಟ್ಟಿದ್ದಾರೆ. ಇದುವರೆಗೂ ದೈಹಿಕ ಶಿಕ್ಷಕರಿಲ್ಲ, ಇನ್ನೂ ಮೂರು ಪಠ್ಯಕ್ರಮಗಳಿಗೆ ಶಿಕ್ಷಕರ ಕೊರತೆ ಇದೆ ಎಂಬ ಮಾಹಿತಿ ತಿಳಿದು ಬಂದಿದೆ.
ವಿದ್ಯಾರ್ಥಿಗಳ ಕೊಠಡಿಗಳಲ್ಲಿ ಫ್ಯಾನ್ ಇದ್ದರೂ ಇಲ್ಲಂತಾಗಿದೆ. ಕೆಲವು ಫ್ಯಾನ್ ಕೆಟ್ಟು ನಿಂತಿವೆ, ವಿದ್ಯುತ್ ಕೈ ಕೊಟ್ಟರೆ ಜನರೇಟರ್ ಇಲ್ಲ, ಕೆಟ್ಟುನಿಂತು ವರ್ಷಗಳೇ ಕಳೆದಿವೆ, ಜನರೇಟರ್ ರಿಪೇರಿ ಮಾಡಿಸಿಲ್ಲ, ಮಕ್ಕಳಿಗೆ ಬಿಸಿನೀರು ಇಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಪಾವಗಡ ತಾಲ್ಲೂಕಿನ ಸುಮಾರು 8 ಮೊರಾರ್ಜಿ ವಸತಿ ಶಾಲೆಗಳನ್ನು ತೆರೆದು ಪ್ರತಿಭಾವಂತ ಹಾಗೂ ಬಡ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಸಿಗುವ ನಿಟ್ಟಿನಲ್ಲಿ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಆದರೆ ಇಲ್ಲಿ ಕಾರ್ಯನಿರ್ವಹಿಸುವ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಸೇರಿ ದುರುಪಯೋಗ ಪಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಆದರೂ ತಾಲ್ಲೂಕಿನ ಜನಪ್ರತಿನಿಧಿಗಳು ಹಾಗೂ ಮೇಲುಸ್ತುವಾರಿ ಅಧಿಕಾರಿಗಳು ವಸತಿ ಶಾಲೆಗಳಿಗೆ ಭೇಟಿ ನೀಡದೆ ಅಧೋಗತಿಗೆ ಜಾರುತ್ತಿವೆ ಎಂದು ಪೋಷಕರು ಆರೋಪಿಸಿದ್ದು, ಪ್ರಾಂಶುಪಾಲರು ಮತ್ತು ವಾರ್ಡನ್ ಮಾತ್ರ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




