ತುರುವೇಕೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸದಾಗಿ ಜಾರಿಗೆ ತಂದಿರುವ ಎಫ್.ಎಫ್.ಎಸ್ (FFS) ಮೊಬೈಲ್ ಆಪ್ನಿಂದಾಗಿ ರೈತರಿಗೆ ಮತ್ತು ರಸಗೊಬ್ಬರ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ವತಿಯಿಂದ ತಹಶೀಲ್ದಾರ್ ಕುಂಞಿ ಅಹಮದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಹೆಚ್.ಆರ್.ರಂಗನಾಥ್, “ಹೊಸ ಪಿಒಎಸ್ (POS) ಮಿಷನ್ಗೆ ಅಳವಡಿಸಲಾಗಿರುವ ಎಫ್.ಎಫ್.ಎಸ್ ಮೊಬೈಲ್ ಆಪ್ನಲ್ಲಿನ ನಿಯಮಗಳು ಮತ್ತು ಮಾಹಿತಿ ಎಲ್ಲಾ ರೈತರಿಗೂ ಸಮರ್ಪಕವಾಗಿ ತಿಳಿದಿರುವುದಿಲ್ಲ. ಒಂದು ವೇಳೆ ನಿಯಮಗಳ ಅರಿವಿದ್ದರೂ, ಆಪ್ ಬಳಸಲು ಬೇಕಾದ ಆಂಡ್ರಾಯ್ಡ್ ಮೊಬೈಲ್ ಫೋನ್ಗಳು ಬಹುತೇಕ ಗ್ರಾಮೀಣ ಭಾಗದ ರೈತರಲ್ಲಿ ಇರುವುದಿಲ್ಲ. ಇದರಿಂದಾಗಿ ಪ್ರತಿನಿತ್ಯ ರೈತರು ಹಾಗೂ ಮಾರಾಟಗಾರರ ಮಧ್ಯೆ ಅನಗತ್ಯ ವಾಗ್ವಾದಗಳು ನಡೆಯುತ್ತಿದ್ದು, ರೈತರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದು ಕಷ್ಟಸಾಧ್ಯವಾಗಿದೆ,” ಎಂದು ಅಳಲು ತೋಡಿಕೊಂಡರು.
“ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿರುವುದರಿಂದ ರೈತರು ಗೊಬ್ಬರಕ್ಕಾಗಿ ಮುಗಿಬೀಳುತ್ತಿದ್ದಾರೆ. ಈ ಸಂದರ್ಭದಲ್ಲಿ ಗೊಬ್ಬರದ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಸುಸೂತ್ರವಾಗಿ ನಡೆಯಬೇಕಾದರೆ, ಸದ್ಯದ ಎಫ್.ಎಫ್.ಎಸ್ ಆಪ್ ಜೊತೆಗೆ ಹಳೆಯ ರಸಗೊಬ್ಬರ ಪಿಒಎಸ್ ಮಾರಾಟ ವ್ಯವಸ್ಥೆಯನ್ನೂ ಮುಂದುವರಿಸಲು ಸರ್ಕಾರಗಳು ಅನುಮತಿ ನೀಡಬೇಕು,” ಎಂದು ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೈಲಾಸ್, ಕಾರ್ಯದರ್ಶಿ ಬಸವರಾಜು, ಖಜಾಂಚಿ ದೇವರಾಜು, ಪ್ರಮುಖ ಸದಸ್ಯರುಗಳಾದ ರಿಯಾಜ್, ದಿನೇಶ್, ಬಸವರಾಜು, ರುದ್ರೇಶ್, ಪೃಥ್ವಿ ಸೇರಿದಂತೆ ತಾಲ್ಲೂಕಿನ ಹಲವಾರು ಕೃಷಿ ಪರಿಕರ ಮಾರಾಟಗಾರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




