ಕುಣಿಗಲ್: ಚುನಾವಣಾ ಆಯೋಗದ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಬಿಎಲ್ ಒಗಳ ಕರ್ತವ್ಯಕ್ಕೆ, ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿ ಅವರನ್ನು ಭಯ ಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ವಕ್ತಾರ ಎಚ್.ಎಸ್.ದೀಪಕ್ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಅವರು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪಟ್ಟಣದ 19 ನೇ ವಾರ್ಡ್ನಲ್ಲಿ ಒಂದು ಮನೆಯಲ್ಲಿ ಕುಳಿತುಕೊಂಡು ಬಿಎಲ್ ಒ ಇಂದುಮತಿ ಎಸ್ ಐಆರ್ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಅವರ ಆರೋಪಕ್ಕೆ ತಿರುಗೇಟು ನೀಡಿದ ದೀಪಕ್ಗೌಡ ಇಂದುಮತಿ ಅವರು ಯಾವುದೇ ಒಂದು ಮನೆಯಲ್ಲಿ ಕುಳಿತುಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಲ್ಲ. ಇಂದುಮತಿ ಅವರಿಗೆ ನೀಡಿರುವ 19 ನೇ ವಾರ್ಡ್ನಲ್ಲಿ 1180 ಮತಗಳಿದ್ದು, ಅವರು ಅಂಗನವಾಡಿ ಕೇಂದ್ರದಲ್ಲಿ ಕುಳಿತುಕೊಂಡು ಆಯಾ ಕುಟುಂಬಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಬೇರ್ಪಡಿಸುತ್ತಿದ್ದ ವೇಳೆ ಅಲ್ಲಿಯ ಜನರು ನಮಗೆ ಸೇರಿದ ಫಾರಂ ಕೊಡಿ ಎಂದು ಬಿಎಲ್ ಒ ಇಂದುಮತಿ ಅವರನ್ನು ಕೇಳಿದ್ದಾರೆ.
ಅಷ್ಟರಲ್ಲಿ ಅಲ್ಲಿಗೆ ಬಂದ ಜೆಡಿಎಸ್ ಕಾರ್ಯಕರ್ತರು ವಿಡಿಯೋ ಮಾಡಿ ಬಿಎಲ್ ಒ ಒಂದು ಮನೆಯಲ್ಲಿ ಕುಳಿತುಕೊಂಡು ಗುಂಪು ಕಟ್ಟಿಕೊಂಡು ಮತ ಪರಿಷ್ಕರಣೆ ಮಾಡಿದ್ದಾರೆ, ಇದಕ್ಕೆ ಶಾಸಕರ ಬೆಂಬಲವಿದೆ, ಬಿ.ಎಲ್.ಒಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಬಿಎಲ್ಒಗೆ ತಹಸೀಲ್ದಾರ್, ಜಿಲ್ಲಾಧಿಕಾರಿಗಳು ನೋಟಿಸ್ ಸಹ ನೀಡಿದ್ದಾರೆ. ಇದಕ್ಕೆ ಇಂದುಮತಿ ಅವರು ಸಹಾ ಉತ್ತರ ನೀಡಿದ್ದಾರೆ. ಪ್ರಭಾವಿ ರಾಜಕಾರಣಿ ಆದ ತಕ್ಷಣ ಮತದಾರರ ಪಟ್ಟಿಯಲ್ಲಿ ಹೆಸರನ್ನು ತೆಗೆದುಹಾಕಬಹುದು, ಸೇರಿಸಬಹುದು ಎಂಬುದು ಅವರ ಭ್ರಮೆಯಾಗಿದೆ. ನೀವು ಬಿಎಲ್ಒಗಳ ಕಾರ್ಯಕ್ಕೆ ಅಡ್ಡಿ ಪಡಿಸಿ ಭಯ ಸೃಷ್ಟಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಜಗದೀಶ್ ಅವರನ್ನು ಕುಟುಕಿದರು.
ದಿನಾಂಕ ವಿಸ್ತರಿಸಿ: ಒಬ್ಬ ಬಿಎಲ್ ಒ ದಿನ ಒಂದಕ್ಕೆ 10 ಮತದಾರರ ಪರಿಷ್ಕರಣೆ ಮಾಡಿದರೆ ಸಾಕು ಎಂದು ಹೇಳಿದ್ದೀರಿ. ಒಂದು ವಾರ್ಡ್ನಲ್ಲಿ 1200 ರಿಂದ 1600 ಕ್ಕೂ ಅಧಿಕ ಮತದಾರರಿದ್ದಾರೆ. ಒಂದು ದಿನದಲ್ಲಿ 10 ಜನ ಮತದಾರರ ಪರಿಷ್ಕರಣೆ ಮಾಡಿದರೆ ಎಷ್ಟು ದಿನ ಬೇಕಾಗುತ್ತದೆ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲೋಹಿತ್, ಮುಖಂಡರಾದ ಸೋಮಸುಂದರ್, ಶಿವಕುಮಾರ್ ಮತ್ತಿತರರು ಇದ್ದರು.
ತಾಲೂಕಿನಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಬಾಂಗ್ಲಾ ವಲಸಿಗರು ಇರುವರು ಎಂದು ನಿಮ್ಮ ಬಳಿ ದಾಖಲೆ ಇದ್ದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿ, ನಾವು ನಿಮ್ಮೊಂದಿಗೆ ಕೈ ಜೋಡಿಸಿ, ವಲಸಿಗರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಿಸೋಣ. ಆದರೆ ಬಾಂಗ್ಲಾ ವಲಸಿಗರ ಮತಗಳಿಂದ ಡಾ.ಎಚ್.ಡಿ.ರಂಗನಾಥ್ ಅವರು ಶಾಸಕರಾಗಿಲ್ಲ. ಬಿಎಲ್ಒ ವಿರುದ್ಧ ದೂರು ಕೊಡುವುದನ್ನು ಬಿಟ್ಟು, ನಿಮ್ಮ ಪಕ್ಷದ ನಾಯಕರು ಕೇಂದ್ರ ಸಚಿವರಾಗಿದ್ದಾರೆ, ಅವರ ಮೂಲಕ ದಿನಾಂಕ ವಿಸ್ತರಣೆಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ.
— ಎಚ್.ಎಸ್.ದೀಪಕ್ಗೌಡ, ಕಾಂಗ್ರೆಸ್ ವಕ್ತಾರರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


