ಕೊರಟಗೆರೆ: ಕರುನಾಡಿನ 94 ನದಿಗಳಿಂದ ಜಲ ಸಂಗ್ರಹಣೆಯ ಜನತಾ ಜಲಧಾರೆ ರಥಯಾತ್ರೆಯು 184ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ನಡೆಸುತ್ತಿದೆ. ಕೊರಟಗೆರೆ ಕ್ಷೇತ್ರದಲ್ಲಿ ನಡೆಯುವ ಜನತಾ ಜಲಧಾರೆ ರಥಯಾತ್ರೆ ಸಮಾರಂಭ ಯಶಸ್ವಿಗೆ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ರೈತ ಬಾಂಧವರ ಸಹಕಾರ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.
ಕೊರಟಗೆರೆ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರಟಗೆರೆ ಕ್ಷೇತ್ರಕ್ಕೆ ಏ.26ರ ಮಂಗಳವಾರ ಜನತಾ ಜಲಧಾರೆ ರಥಯಾತ್ರೆ ಆಗಮಿಸಿ 6 ಹೋಬಳಿಯಲ್ಲಿ ಸಂಚಾರ ನಡೆಸಲಿದೆ. ಏ.27ರ ಬುಧವಾರ ಪಪಂ ಮುಂಭಾಗ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಸೇರಿದಂತೆ ತುಮಕೂರು ಜಿಲ್ಲೆಯ ಎಲ್ಲಾ ನಾಯಕರು ಆಗಮಿಸಲಿದ್ದಾರೆ. ಕೊರಟಗೆರೆ ಕ್ಷೇತ್ರದ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಿ ಸಮಾರಂಭ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ತುಮಕೂರು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ, ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ಮರುಕ್ಷಣವೇ ಜನತಾ ಜಲಧಾರೆ ಕಾರ್ಯಕ್ರಮ ಜಾರಿಗೆ ಬರಲಿದೆ. ಜನತಾ ಜಲಧಾರೆ ಯೋಜನೆ ಮತ್ತು ಮಹತ್ವ ತಿಳಿಸುವುದೇ ರಥಯಾತ್ರೆಯ ಉದ್ದೇಶವಾಗಿದೆ. ಕಲ್ಪತರು ಜಿಲ್ಲೆಯಲ್ಲಿ ಕಾರ್ಯಕ್ರಮ ಯಶಸ್ವಿ ಆಗಲಿದೆ ಎಂದು ತಿಳಿಸಿದರು.
ಕೊರಟಗೆರೆ ಜೆಡಿಎಸ್ ಪಕ್ಷದ ವಕ್ತಾರ ತುಂಬಾಡಿ ಲಕ್ಷ್ಮೀಶ್ ಮಾತನಾಡಿ ಜನತಾ ಜಲಧಾರೆ ರಥಯಾತ್ರೆಯು ಕರ್ನಾಟಕದ 184ಕ್ಷೇತ್ರದಲ್ಲಿ ಸಂಚಾರ ನಡೆಸಿ ಜಲಮೂಲದ ಅರಿವು ಮೂಡಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ. ರೈತಾಪಿವರ್ಗಕ್ಕೆ ಅನುಕೂಲ ಆಗುವಂತಹ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮಕ್ಕೆ ಕೊರಟಗೆರೆ ಕ್ಷೇತ್ರದ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಕಾರ್ಯಧ್ಕಕ್ಷ ನರಸಿಂಹರಾಜು, ವಕ್ತಾರ ಟಿ.ಸಿ.ಲಕ್ಷ್ಮೀಶ್, ಕಾರ್ಯದರ್ಶಿ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಮಾಜಿ ತಾಪಂ ಸದಸ್ಯ ಸಾಕರಾಜು, ಪಪಂ ಸದಸ್ಯ ಲಕ್ಷ್ಮಿನಾರಾಯಣ, ಮುಖಂಡರಾದ ವೀರಕ್ಯಾತರಾಯ, ಪಾರುಕ್ ಅಹಮ್ಮದ್, ಗಿರೀಶ್, ಲಕ್ಷ್ಮಿಕಾಂತ್, ನಂಜಪ್ಪ, ಸಿದ್ದಪ್ಪ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5