ಕಲಬುರಗಿ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ ದೇಹಕ್ಕೆ ಜಿಲೆಟಿನ್ ಕಡ್ಡಿಗಳನ್ನು ಕಟ್ಟಿಕೊಂಡು ಸ್ಫೋಟಿಸಿಕೊಂಡ ಪರಿಣಾಮ ತಂದೆ ಹಾಗೂ ಪುತ್ರಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ ನಡೆದಿದೆ.
ಶಿವಲಾಲ್ ರಾಠೋಡ (49) ಹಾಗೂ ಅವರ ಪುತ್ರಿ ಮೀರಾ ರಾಠೋಡ (15) ಮೃತರು. ಶಿವಲಾಲ್ ಅವರ ಪತ್ನಿ ಸವಿತಾ (40), ಪುತ್ರ ಪ್ರಕಾಶ್, ಸಂಬಂಧಿಕರಾದ ಸುರೇಖಾ ಚೌವ್ಹಾಣ (30) ಮತ್ತು ವಿವೇಕ್ ಚೌವ್ಹಾಣ (12) ಗಾಯಾಳುಗಳು.
ಗಾಯಾಳುಗಳನ್ನು ತಕ್ಷಣವೇ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ, ಶಿವಲಾಲ್ ಹಾಗೂ ಅವರ ಪತ್ನಿ ಸವಿತಾ ನಡುವೆ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು. ಇದರಿಂದ ಮನನೊಂದ ಸವಿತಾ ಅವರು ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಕರೆದುಕೊಂಡು ಪತಿಯನ್ನು ತೊರೆದು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು.
ಮಂಗಳವಾರ ಬೆಳಿಗ್ಗೆ ಶಿವಲಾಲ್ ತಮ್ಮ ದೇಹಕ್ಕೆ ಜಿಲೆಟಿನ್ ಕಡ್ಡಿಗಳನ್ನು ಕಟ್ಟಿಕೊಂಡು ಪತ್ನಿ ಮತ್ತು ಮಕ್ಕಳು ತಂಗಿದ್ದ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಮನೆಗೆ ಪ್ರವೇಶಿಸಿದ ತಕ್ಷಣ ಒಳಗಿನಿಂದ ಬಾಗಿಲು ಬಂದ್ ಮಾಡಿಕೊಂಡು ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಶಿವಲಾಲ್ ಹಾಗೂ ಅವರ ಪುತ್ರಿ ಮೀರಾ ಅವರ ದೇಹಗಳು ಸ್ಥಳದಲ್ಲೇ ಛಿದ್ರಗೊಂಡು ಭೀಕರವಾಗಿ ಸಾವನ್ನಪ್ಪಿದ್ದಾರೆ. ಧಮಾಕಾದ ಸದ್ದು ಕೇಳಿ ಮಟಕಿ ತಾಂಡಾದ ನಿವಾಸಿಗಳು ಬೆಚ್ಚಿಬಿದ್ದಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸಂದರ್ಭ ತಿಳಿದ ಆಳಂದ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವಲಾಲ್ ಗೆ ಈ ಅಪಾಯಕಾರಿ ಸ್ಫೋಟಕ ವಸ್ತು ಎಲ್ಲಿಂದ ಮತ್ತು ಹೇಗೆ ದೊರೆಯಿತು ಎಂಬ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
