ಕೊರಟಗೆರೆ: ಪಟ್ಟಣದ ತಾಲ್ಲೂಕಿನ ಇರಕಸಂದ್ರ ಗ್ರಾಮದಲ್ಲಿ 300ಕ್ಕೂ ಹೆಚ್ಚು ಮನೆಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ಮಶಾನವೇ ಮರೀಚಿಕೆ ಆಗಿದ್ದು ಶವ ಸಂಸ್ಕಾರ ಮಾಡಲು ಜಾಗಕ್ಕೆ ಬಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ.
ಇನ್ನೂ ಬೆಟ್ಟಗುಡ್ಡದಲ್ಲಿ ಶವವನ್ನು ಕಲ್ಲಿನಿಂದ ಮುಚ್ಚುವ ದುಸ್ಥಿತಿ ಎದುರಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ಸ್ಮಶಾನಕ್ಕಾಗಿ ಗ್ರಾಮ ಪಂಚಾಯಿತಿ ಮುಂದೆ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದು, ಸಂಬಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಕೆರೆಯ ಅಂಗಳವೇ ಶವ ಸಂಸ್ಕಾರ ಮಾಡುವ ಜಾಗವಾಗಿದ್ದು, ಕೆರೆಯಲ್ಲಿ ನೀರು ತುಂಬಿದರೆ, ಬೆಟ್ಟಗುಡ್ಡವೇ ಗತಿ ಎಂಬಂತಾಗಿದೆ ಇಲ್ಲಿನ ನಿವಾಸಿಗಳ ಕಥೆ.
- ಇರಕಸಂದ್ರ ಕಾಲೋನಿಯಲ್ಲಿ ಯಾರೇ ಸತ್ತರೂ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲ.
- 300ಕ್ಕೂ ಅಧಿಕ ಕುಟುಂಬಗಳೂ ವಾಸವಿರುವ ಗ್ರಾಮ.
- ಗ್ರಾಮದ ಅರ್ಧ ಜನರಿಗೆ ಸ್ವಂತ ಜಮೀನು ಸಹ ಇಲ್ಲ.
- ಕೆರೆಯ ಅಂಗಳ, ಬೆಟ್ಟ ಗುಡ್ಡ, ರಾಜ್ಯ ಹೆದ್ದಾರಿ, ಹಳೆ ಚರಂಡಿ ಮತ್ತು ಅರಣ್ಯ ಪ್ರದೇಶದ ಸ್ಮಶಾನ ಜಾಗ.
ಕೊರಟಗೆರೆ ಆಡಳಿತ ಮತ್ತು ರಾಜಕೀಯ ಧುರೀಣರು ಚುನಾವಣೆಗೆ ಮಾತ್ರ ಸಿಮೀತವಾದ ಪರಿಣಾಮ 75 ವರ್ಷಗಳಿಂದ ಸ್ಮಶಾನವೇ ಮರೀಚಿಕೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಇರಕಸಂದ್ರ ಕಾಲೋನಿ ಮತ್ತು ನೀಲಗೊಂಡನಹಳ್ಳಿ ಗ್ರಾಮದಲ್ಲಿ 300 ಕ್ಕೂ ಅಧಿಕ ಮನೆಗಳಿವೆ. ಗ್ರಾಮದಲ್ಲಿ ಯಾರೇ ಸತ್ತರೂ ಕೆರೆಯ ಅಂಗಳದಲ್ಲೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಜಮೀನು ಮತ್ತು ಮನೆಯೇ ಇಲ್ಲದಿರುವ ಬಡ ಜನರು ಸತ್ತಾಗ ಸ್ಮಶಾನದ ಜಾಗಕ್ಕಾಗಿಯು ಪ್ರತಿಭಟನೆ ಮಾಡುವ ದುಸ್ಥಿತಿ ಕೊರಟಗೆರೆಯಲ್ಲಿ ನಿರ್ಮಾಣವಾಗಿದೆ.
ಸ್ಮಶಾನದ ಜಾಗ ಗುರುತಿಸಲು ಕಂದಾಯ ಅಧಿಕಾರಿ ಮತ್ತು ಗ್ರಾಪಂ ಪಿಡಿಓ ನಿರ್ಲಕ್ಷವೇಕೆ? ಗ್ರಾಪಂ ಸದಸ್ಯರು, ತಾಪಂ ಮತ್ತು ಜಿಪಂ ಸದಸ್ಯರ ಪಾತ್ರವೇನು? ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಈ ವಿಚಾರ ತಿಳಿದಿಲ್ಲವೇ? ಮೃತಪಟ್ಟ ಮಹಿಳೆಯ ಶವ ಹೂಳಲು 6/3 ಅಡಿ ಜಾಗವನ್ನೇ ನೀಡದಂತಹ ಕೊರಟಗೆರೆ ಆಡಳಿತಕ್ಕೆ ಇರಕಸಂದ್ರ ಗ್ರಾಮಸ್ಥರು ಹಿಡಿಶಾಪ ಹಾಕಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರಕಸಂದ್ರ ಕಾಲೋನಿಯ ಲೇ.ಗಂಗಯ್ಯನ ಮಡದಿ ವೆಂಕಟಮ್ಮ (81) ಡಿ.18ರ ಭಾನುವಾರ ಸಂಜೆ ಮೃತ ಪಟ್ಟಿದ್ದಾರೆ. ಲೇ.ಗಂಗಯ್ಯ ಮೃತಪಟ್ಟಾಗಲು ಸ್ಮಶಾನ ಇಲ್ಲದೇ ಕೆರೆಯ ಅಂಗಳದಲ್ಲೇ ಶವ ಸಂಸ್ಕಾರ ನಡೆಸಲಾಗಿದೆ. ಪ್ರಸ್ತುತ ಸ್ಮಶಾನದ ಜಾಗಕ್ಕಾಗಿ ಮೃತ ಮಹಿಳೆಯ ಶವದೊಂದಿಗೆ ಗ್ರಾಮಸ್ಥರು ಸೇರಿ ನೀಲಗೊಂಡನಹಳ್ಳಿ ಗ್ರಾಪಂಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆರೆಯ ಅಂಗಳವೇ ಸ್ಮಶಾನದ ಜಾಗ:
ಐ.ಕೆ.ಕಾಲೋನಿ ಗ್ರಾಮದಲ್ಲಿ 300 ಮನೆಗಳಿದ್ದು 1,200ಕ್ಕೂ ಅಧಿಕ ಮತದಾರರು ಇದ್ದಾರೆ. ಕಳೆದ 50 ವರ್ಷದಿಂದ ಯಾರೇ ಸತ್ತರೂ ಇರಕಸಂದ್ರ ಕಾಲೋನಿಯ ಕೆರೆಯ ಅಂಗಳದಲ್ಲೇ ಶವಸಂಸ್ಕಾರ ನಡೆಸುತ್ತಾರೆ. ಪ್ರಸ್ತುತ ಕೆರೆಯಲ್ಲಿ ನೀರು ತುಂಬಿರುವ ಪರಿಣಾಮ ಕೆರೆಯ ಜಾಗವು ನೀರಿನಿಂದ ಭರ್ತಿಯಾಗಿದೆ. ಸ್ಮಶಾನಕ್ಕೆ ಜಾಗವಿಲ್ಲದೇ ಎರಡು ದಿನದಿಂದ ಬಡ ಕುಟುಂಬವು ಬೀದಿಯಲ್ಲಿ ಹೋರಾಟ ನಡೆಸುತ್ತೀದೆ.
ಯಾರೇ ಮೃತಪಟ್ಟರೂ ಕುಟುಂಬಸ್ಥರು ಶವದ ಮುಂದೆ ಅಳುತ್ತಿಲ್ಲ. ಆರಡಿ/ಮೂರಡಿ ಜಾಗಕ್ಕಾಗಿ ಕಂಡೋರ ಮನೆಯ ಮುಂದೆ ಅಳುವುದೇ ಜಾಸ್ತಿ. 50 ವರ್ಷದಿಂದ ಕೆರೆಯ ಅಂಗಳವೇ ನಮ್ಮ ಗ್ರಾಮಕ್ಕೆ ಸ್ಮಶಾನ. ಕೊರಟಗೆರೆ ಆಡಳಿತ ಬೆಟ್ಟಗುಡ್ಡದಲ್ಲಿ ಈಗ ಸ್ಮಶಾನಕ್ಕೆ ಜಾಗ ಗುರುತಿಸಿದೆ. ನಮ್ಮೂರ ಬಡವರ ನೋವು ಕೇಳೊರು ಯಾರು ಇಲ್ಲದಾಗಿದೆ.
– ಕೃಷ್ಣಮೂರ್ತಿ. ಗ್ರಾಪಂ ಸದಸ್ಯ. ಐ.ಕೆ.ಕಾಲೋನಿ
ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ:
ತಾಲೂಕು ಇಲಾಖೆ ವತಿಯಿಂದ ಈಗಾಗಲೇ ಸ್ಮಶಾನಕ್ಕಾಗಿ ಒಂದು ಎಕರೆ ಭೂಮಿಯನ್ನು ಗುರುತಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದರು ಸಹ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಭಿವೃದ್ಧಿ ಪಡಿಸದೆ ಅವರ ನಿರ್ಲಕ್ಷ್ಯದಿಂದ ಇಂತಹ ದುಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಮಶಾನಕ್ಕಾಗಿ ಗುರುತಿಸಿದ ಭೂಮಿಯ ಜಾಗವನ್ನು ಅಭಿವೃದ್ಧಿಪಡಿಸದೆ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ತಾಲೂಕು ಕಂದಾಯ ಇಲಾಖೆ ವತಿಯಿಂದ ಒಂದು ಎಕರೆ ಭೂಮಿಯನ್ನು ಗುರುತಿಸಿ ಅದಕ್ಕೆ ಸಂಬಂಧ ಪಟ್ಟ ದಾಖಲಾತಿ ಪ್ರತಿಗಳನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸುವುದು ಕಾಣಬಹುದು..
ವರದಿ: ಮಂಜುಸ್ವಾಮಿ ಎಂ ಎನ್.ಕೊರಟಗೆರೆ.