ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮೈಸೂರು ಒಡೆಯರ್ ಆಗಿರುವ ಯದುವೀರ್ ಈ ವೇಳೆ ಸುಮಾರು 5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಹೆಸರಲ್ಲಿ ಯಾವುದೇ ಕೃಷಿ ಭೂಮಿಯಾಗಲಿ, ಸೈಟ್ ಆಗಲಿ, ಮನೆ ಆಗಲಿ ಇಲ್ಲ ಎಂದು ತಮ್ಮ ಅಫಿಡವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ.
ಯದುವೀರ್ ಒಡೆಯರ್ ಅವರ ಕೈಯಲ್ಲಿ ಸದ್ಯ ಒಂದು ಲಕ್ಷ ರೂ. ನಗದನ್ನು ಹೊಂದಿದ್ದು, ವಿವಿಧ ಬ್ಯಾಂಕ್ ಅಕೌಂಟ್ ಗಳಲ್ಲಿ 1.36 ಕೋಟಿ ರೂ. ಅನ್ನು ಹೊಂದಿದ್ದಾರೆ. 3.25 ಕೋಟಿ ರೂ. ಮೌಲ್ಯದ 4 ಕೆಜಿ ಚಿನ್ನ, 14 ಲಕ್ಷ ರೂ. ಮೌಲ್ಯದ 20 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಒಟ್ಟು 4.99 ಕೋಟಿ ರೂ. ಚರಾಸ್ತಿಯನ್ನು ಯದುವೀರ್ ಈ ವೇಳೆ ಘೋಷಿಸಿಕೊಂಡಿದ್ದಾರೆ. ಇನ್ನು, ಅವರ ಪತ್ನಿ ತ್ರಿಷಿಕಾ ಬಳಿ 75 ಸಾವಿರ ರೂ. ನಗದು ಇದ್ದು, ಎಚ್ ಡಿಎಫ್ ಸಿ ಬ್ಯಾಂಕ್ನಲ್ಲಿ 1 ಲಕ್ಷ ರೂ. ಹೊಂದಿದ್ದಾರೆ.
90 ಲಕ್ಷ ರೂ. ಮೌಲ್ಯದ 2 ಕೆಜಿ ಚಿನ್ನ, 5.5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿಗಳಿದ್ದು, 7 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಒಟ್ಟು 1.04 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದಾರೆ. ಯದುವೀರ್ ಅವರು ಅವಲಂಭಿತರನ್ನು ಘೋಷಿಸಿದ್ದು, ಅವರ ಹೆಸರಲ್ಲಿ ಒಟ್ಟು 3.63 ಕೋಟಿ ರೂ. ಚರಾಸ್ತಿ ಇದೆ ಎಂದು ಹೇಳಿದ್ದಾರೆ. ಇವರ ಕೈಯಲ್ಲಿ 5 ಸಾವಿರ ರೂ. ನಗದು ಇದ್ದರೆ, ಎಚ್ ಡಿಎಫ್ಸಿ ಬ್ಯಾಂಕ್ ನಲ್ಲಿ 1 ಲಕ್ಷ ರೂ. ಹೊಂದಿದ್ದಾರೆ ಎನ್ನಲಾಗಿದೆ. ಮ್ಯೂಚುವಲ್ ಫಂಡ್ ನಲ್ಲಿ 1.49 ಕೋಟಿ ರೂ. ಇದೆ. ಟಾಟಾ ಲೈಫ್ ಇನ್ಸೂರೆನ್ಸ್ ನಲ್ಲಿ 1.89 ಕೋಟಿ ರೂ. ಹೂಡಿಕೆ ಮಾಡಿದ್ದು, 12 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ ಹೊಂದಿದ್ದು, 5.5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿ ಹೊಂದಿದ್ದು, 7 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿ ಹೊಂದಿದ್ದಾರೆ. ಉಳಿದ ಆಸ್ತಿಗಳೆಲ್ಲಾ ರಾಜಮಾತ ಹೆಸರಿನಲ್ಲಿದೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


