ಮಧುಗಿರಿ: ಮಧುಗಿರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದ್ದಲ್ಲದೆ, ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ದಾಳಿ ನಡೆಸಿದ್ದು, ಮಾಲು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ.
ಮಧುಗಿರಿ ಉಪ ವಿಭಾಗದ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯ ದೊಮ್ಮತಮರಿ ಗ್ರಾಮದಲ್ಲಿ ಭಾನುವಾರ ಮಧುಗಿರಿ ಉಪ ವಿಭಾಗದ ಡಿವೈಎಸ್ಪಿ ರಾಮಚಂದ್ರಪ್ಪ ಎನ್.ಬಿ. ಅವರೊಂದಿಗೆ ಪಾವಗಡ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಲೋಕಸಭಾ ಚುನಾವಣೆಯ ಸಂಬಂಧ ಗಸ್ತಿನಲ್ಲಿದ್ದಾಗ ಅಕ್ರಮವಾಗಿ ಯಾವುದೇ ಪರವಾನಗಿ ಹೊಂದಿಲ್ಲದೆ ಮೂರು ಡ್ರಮ್ ಗಳಲ್ಲಿ ಎರಡು ಲಕ್ಷ ರೂ ಮೌಲ್ಯದ ಸುಮಾರು 400 ಲೀಟರ್ ಈಚಲು ಮರದ ಸೇಂದಿಯನ್ನು ಬೂಲೆರೋ ವಾಹನದಲ್ಲಿ (AP02TF1421) ಸೇಂದಿ ಸಾಗಾಟ ಮಾಡುತ್ತಿದ್ದ ಆರೋಪಿ ವೆಂಕಟಂಪಲ್ಲಿ ಗ್ರಾಮದ ರಾಮಾಂಜನೇಯಲು ಅಲಿಯಾಸ್ ರಾಮಾಂಜಿ ಬಿಲ್ ನರಸಪ್ಪ ಕರ್ನಾಟಕ ಗಡಿಭಾಗದ ಹಳ್ಳಿಗಳಲ್ಲಿ ಮಾರಾಟ ಮಾಡಲು ಸೇಂದಿ ಸಾಗಾಟ ಮಾಡುತ್ತಿರುವಾಗ ಮಾಲು ಸಮೇತ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ.
ಮಧುಗಿರಿ ವೃತ್ತ ವ್ಯಾಪ್ತಿಯಲ್ಲಿ ಶನಿವಾರದಂದು ಮಧುಗಿರಿ ಪೊಲೀಸ್ ಠಾಣಾ ಸರಹದ್ದಿನ ಮಧುಗಿರಿ ಟೌನ್ ಕೊಡಗೇನಹಳ್ಳಿ ಜಂಕ್ಷನ್ ಬಳಿ ಬಡವನಹಳ್ಳಿ ಗ್ರಾಮದ ರಂಗನಾಥ್ ಡಿ ಬಿನ್ ಲೇಟ್ ದಾಸನಾಯಕ (42) ಅಕ್ರಮವಾಗಿ ಮಧ್ಯದ ಟೆಟ್ರಾ ಪಾಕೇಟ್ ಗಳನ್ನು ತುಂಬಿರುವ ಒಂದು ಬುಟ್ಟಿಯ ಬ್ಯಾಗನ್ನು ಇಟ್ಟುಕೊಂಡಿದ್ದು, ಈತನ ಮೇಲೆ ದಾಳಿ ಮಾಡಿದ ಪೊಲೀಸರು ಒಟ್ಟು 18,432 ರೂ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕೆಎಸ್ ಪಿಎಸ್ ಪೊಲೀಸ್ ಉಪಾಧ್ಯಕ್ಷಕರು ಮಧುಗಿರಿ ಉಪ ವಿಭಾಗ ವಿ.ಮರಿಯಪ್ಪ ಇವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಾವಗಡ ಪೊಲೀಸ್ ನಿರೀಕ್ಷಕರಾದ ಸುರೇಶ್, ಎ ಎಸ್ ಐ ಗೋವಿಂದಪ್ಪ ಹಾಗೂ ಪಾವಗಡ ಪೊಲೀಸ್ ಠಾಣೆಯ ಸಿಬ್ಬಂದಿ, ಮಧುಗಿರಿ ವೃತ್ತದ ಪೊಲೀಸ್ ನಿರೀಕ್ಷಕರಾದ ರವಿ ಎಸ್., ಮಧುಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿಕುಮಾರ್ ಸಿ, ಮುತ್ತುರಾಜ್ ಜೆ ಮತ್ತು ಪೊಲೀಸ್ ಠಾಣಾ ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ವಿ. ಅಶೋಕ್ ಅಭಿನಂದಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.